ಮನೆ ಸುದ್ದಿ ಜಾಲ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮಕ್ಕೆ ಚಾಲನೆ

0

ಮಂಡ್ಯ: ತಾಲ್ಲೂಕಿನ ಸಿದ್ದಯ್ಯನಕೊಪ್ಪಲು ರಿಪಬ್ಲಿಕ್‌ ಸೆಂಟ್ರಲ್‌ ಸ್ಕೂಲ್‌ ಅವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಬೆಂಗಳೂರು), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಿಪಬ್ಲಿಕ್‌ ಸೆಂಟ್ರಲ್‌ ಸ್ಕೂಲ್‌ ವತಿಯಿಂದ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಘೋಷಣೆ ಅಂಗವಾಗಿ ಮಕ್ಕಳ ಕಾನೂನುಗಳ ಹಾಗೂ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ ನಡೆಯಿತು.

ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್‌, 21ನೇ ಶತಮಾನದಲ್ಲಿಯೂ ಬಾಲ್ಯ ವಿವಾಹ ನಡೆಯುತ್ತದೆ ಎಂದರೆ ಎಲ್ಲರೂ ತಲೆ ತಗ್ಗಿಸುವ ವಿಚಾರವಾಗಿದೆ. ಜಿಲ್ಲೆಯಲ್ಲಿ ಭ್ರೂಣ ಹತ್ಯೆ, ಅಪ್ರಾಪ್ತ ವಯಸ್ಸಿನ ಗರ್ಭಿಣಿ ಹಾಗೂ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸಾಗಬೇಕು ಎಂದರು.

ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಬಾಲ್ಯ ವಿವಾಹದ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬಾಲ್ಯ ವಿವಾಹ ಮಾಡುವುದು ನಿಲ್ಲಬೇಕು. ಮಕ್ಕಳು ಆಟ ಆಡುವ ವಯಸ್ಸಿನಲ್ಲಿ ಮದುವೆ ಮಾಡುವುದು ಏಕೆ? ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಿ ಮಕ್ಕಳಿಗೆ ಸಹಾಯ ಮಾಡುವುದನ್ನು ಬಿಟ್ಟು ಬಾಲ್ಯ ವಿವಾಹವೆಂಬುವ ಪಿಡುಗಿಗೆ ದೂಡುವುದನ್ನು ಸಂಪೂರ್ಣವಾಗಿ ವಿರೋಧಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಯಾರೇ ಬಾಲ್ಯ ವಿವಾಹ ಮಾಡಿದರೆ ಮತ್ತು ಅದನ್ನು ಪ್ರೋತ್ಸಾಹಿಸಿದರೆ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬಹುದು ಎನ್ನುವುದು ಕಾನೂನಿನಲ್ಲಿ ಇದೆ ಎನ್ನುವುದನ್ನು ಅರ್ಥ ಮಾಡಿಸಬೇಕು. ಈ ಸಂಬಂಧ ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ತುರ್ತಾಗಿ ಮಾಡುವ ಮೂಲಕ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಅಪರ ಪೊಲೀಸ್‌ ವರಿಷ್ಠಾಧಿಕಾರಿ ಗಂಗಾಂಧರಸ್ವಾಮಿ ಮಾತನಾಡಿ, ಮಕ್ಕಳಿಗೆ ಒಂದು ಮಗುವಾದರೆ ಅದನ್ನು ಬೆಳೆಸುವ ಪರಿ ಹೇಗಿರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಏಕೆಂದರೆ ನೀವೆ ಮಕ್ಕಳಾಗಿ ಇನ್ನೂ ಪ್ರಾಪಂಚಿಕ ಜ್ಞಾನವನ್ನು ಪಡೆದಿರುವುದಿಲ್ಲ ಹೀಗಿದ್ದಾಗ ಕಷ್ಟವಾಗುವುದಿಲ್ಲವೇ? ಹಾಗಾಗಿ ಕಾನೂನಿನಲ್ಲಿ ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ಇರಬೇಕೆಂಬುದು ಇದೆ. ಆದರೆ ಇದನ್ನು ಬದಲಿಸ ಬೇಕೆನ್ನುವ ಅಭಿಪ್ರಾಯವಿದೆ. ನೀವು ಕಲಿಯುವ ವಯಸ್ಸಲ್ಲಿ ಮದುವೆ ಸಂಕೋಲೆಯನ್ನು ತೊಡಿಸುವುದು ಬೇಡ ಎಂದು ತಿಳಿಸಿದರು.

ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಮಿಕ್ಕೆರೆ ವೆಂಕಟೇಶ್‌ ಮಾತನಾಡಿದರು. ಬಾಲ್ಯ ವಿವಾಹ ಮುಕ್ತ ಮಾಡಲು ಶಾಲಾ ಹಂತದಲ್ಲಿಯೇ ಪ್ರಯತ್ನ ಪಡಬೇಕು. ಬಾಲ್ಯ ವಿವಾಹವೆನ್ನುವುದು ದೊಡ್ಡ ಸಮಸ್ಯೆ ಆಗಿದೆ. ಇದರಿಂದ ಪೋಷಕರು ಎಚ್ಚರಿಕೆಯಿಂದ ಇರಬೇಕು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ನೆರವಿಗೆ ಬರಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ(ದಕ್ಷಿಣ ವಲಯ)ಮಹದೇವು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಸ್ಕೂಲ್‌ ಕಾರ್ಯದರ್ಶಿ ಮಂಜುನಾಥ್‌, ಪ್ರಾಂಶುಪಾಲರಾದ ಸುನೀತಾ, ಕಾರ್ಯಕ್ರಮ ಸಂಯೋಜನಾಧಿಕಾರಿ ರಾಜೇಂದ್ರ ಭಾಗವಹಿಸಿದ್ದರು.