ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಅರವಿಂದ್ ಪನಗಾರಿಯ ಮತ್ತು ಸದಸ್ಯರನ್ನು ಭೇಟಿ ಮಾಡಿ, ಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮತ್ತು ಹಣಕಾಸು ವರ್ಗಾವಣೆಗಳ ಕುರಿತು ರಾಜ್ಯದ ಆಶಯಗಳು, ನಿರೀಕ್ಷೆಗಳು ಮತ್ತು ಪ್ರಸ್ತಾವನೆಗಳನ್ನು ಮಂಡಿಸಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿ ಕಚೇರಿ ಮತ್ತು ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಮುಖ್ಯಮಂತ್ರಿಗಳು ಹೆಚ್ಚುವರಿ ಜ್ಞಾಪಕ ಪತ್ರವನ್ನು ಆಯೋಗಕ್ಕೆ ಸಲ್ಲಿಸುವುದರೊಂದಿಗೆ, ಈ ಜ್ಞಾಪಕ ಪತ್ರದಲ್ಲಿ ನ್ಯಾಯಯುತ, ಪಾರದರ್ಶಕ ಮತ್ತು ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ರಾಜ್ಯದ ದೃಷ್ಟಿಕೋನವನ್ನು ಸ್ಪಷ್ಟಪಡಿಸಿದರು.
ಸಿಎಂ ಸಿದ್ಧರಾಮಯ್ಯ ಅವರು ತಮ್ಮ ಭಾಷಣದಲ್ಲಿ ಕರ್ನಾಟಕವು ದೇಶದ ಒಟ್ಟು ಜಿಡಿಪಿಗೆ ಶೇ.7ರಷ್ಟು ಕೊಡುಗೆ ನೀಡುತ್ತಿರುವುದನ್ನೂ, ಜಿಎಸ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದನ್ನೂ ಗುರುತಿಸಿದರು. ಆದರೆ, ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಸಂಪನ್ಮೂಲದಲ್ಲಿ ತೀವ್ರ ಅಸಮತೋಲನವಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ₹80,000 ಕೋಟಿಯಷ್ಟು ನಷ್ಟ ಉಂಟಾಗಿದೆ. ರಾಜ್ಯದ ತೆರಿಗೆ ಪಾಲು 4.713% ರಿಂದ 3.647% ಕ್ಕೆ ಇಳಿಕೆಗೊಂಡಿದೆ.
ರಾಜ್ಯದ ಮುಖ್ಯ ಪ್ರಸ್ತಾವನೆಗಳು ಕೆಳಕಂಡಂತಿದೆ:
- ಕೇಂದ್ರ–ರಾಜ್ಯ ಹಂಚಿಕೆಯನ್ನು ಕನಿಷ್ಠ 50% ಕ್ಕೆ ಹೆಚ್ಚಿಸಲು ಮತ್ತು ಸೆಸ್ ಹಾಗೂ ಸರ್ಚಾರ್ಜ್ಗಳನ್ನು 5% ಒಳಗೆ ಮಿತಿಗೊಳಿಸಲು ಮನವಿ.
- ತೆರಿಗೆ ಹೊರ ಆದಾಯ ಕೂಡ ಹಂಚಿಕೆ ಆಗುವ “divisible pool”ಗೆ ಸೇರಿಸಬೇಕು.
- ರಾಜ್ಯಗಳು ನೀಡುವ ಆರ್ಥಿಕ ಕೊಡುಗೆಗಳಲ್ಲಿ 60% ಸಂಗ್ರಹವನ್ನು ತಾವೇ ಉಳಿಸಿಕೊಳ್ಳಲು, ಉಳಿದ 40% ಹಂಚಿಕೆಯಾಗಲು ಸೂತ್ರವಿಧಾನ ರೂಪಿಸಬೇಕೆಂದು ಶಿಫಾರಸು.
ಹೆಚ್ಚುವರಿ ಜ್ಞಾಪಕ ಪತ್ರದ ಪ್ರಮುಖ ಪ್ರಸ್ತಾವನೆಗಳು ಕೆಳಕಂಡಂತಿದೆ.
ತಲಾವಾರು ತೆರಿಗೆ ಹಂಚಿಕೆಯಲ್ಲಿ ಹೆಚ್ಚುತ್ತಿರುವ ಅಸಮಾನತೆಗಳು, ಆದಾಯ ಕೊರತೆ ಅನುದಾನಗಳ ಅವೈಜ್ಞಾನಿಕ ವಿನ್ಯಾಸ ಮತ್ತು ರಾಜ್ಯ-ನಿರ್ದಿಷ್ಟ ಅನುದಾನಗಳ ಅನಿರೀಕ್ಷಿತತೆಯ ಕುರಿತು ಹೆಚ್ಚುವರಿ ಜ್ಞಾಪಕ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ದೇಶದ ಜಿಡಿಪಿಗೆ ರಾಜ್ಯದ ಕೊಡುಗೆಯು ಹೆಚ್ಚಾಗಿರುವ ಹೊರತಾಗಿಯೂ, ತಲಾವಾರು ತೆರಿಗೆ ಹಂಚಿಕೆಯು ಗಮನಾರ್ಹವಾಗಿ ಕುಸಿದಿದೆ – 14 ನೇ ಮತ್ತು 15 ನೇ ಹಣಕಾಸು ಆಯೋಗಗಳ ನಡುವಿನ ರಾಷ್ಟ್ರೀಯ ಸರಾಸರಿಯ 95% ರಿಂದ 73% ಕ್ಕೆ ಕುಸಿದಿದೆ.
ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆ ಮುಖ್ಯವಾಗಿದ್ದರೂ, ಇದು ಸ್ಥಿರವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯಗಳಿಗೆ ದಂಡ ವಿಧಿಸುವಂತಾಗಬಾರದು. ಸಂಪನ್ಮೂಲ ಹಂಚಿಕೆಯಲ್ಲಿ ಸಮಾನತೆಯನ್ನು ಫಲಿತಾಂಶ ಆಧಾರಿತ ರೀತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ರಾಜ್ಯವು ಒತ್ತಿಹೇಳಿತು. ಆದ್ದರಿಂದ, ಆದಾಯ-ದೂರ ಮಾನದಂಡದ ಪಾಲನ್ನು 20% ರಷ್ಟು ಕಡಿಮೆ ಮಾಡಿ ದೇಶದ ಜಿಡಿಪಿಯಲ್ಲಿ ರಾಜ್ಯಗಳ ಕೊಡುಗೆಯನ್ನು ಅಳತೆಗೊಲಾಗಿ ಪರಿಗಣಿಸಿ ಇದಕ್ಕೆ 20% ಅಂಕವನ್ನು ನೀಡಬೇಕೆಂದು ಪ್ರಸ್ತಾಪಿಸಿದೆ.
ಹಣಕಾಸು ಆಯೋಗವು ನೀಡುವ ರಾಜಸ್ವ ಕೊರತೆ ಅನುದಾನಗಳ ಪರಿಣಾಮಕಾರಿತ್ವವನ್ನು ಮುಖ್ಯಮಂತ್ರಿಯವರು ಪ್ರಶ್ನಿಸಿದರು. ಪ್ರಸ್ತುತ ರೂಪದಲ್ಲಿ ರಾಜಸ್ವ ಕೊರತೆ ಅನುದಾನವನ್ನು ಪಡೆಯುತ್ತಿರುವ ಫಲಾನುಭವಿ ರಾಜ್ಯಗಳು, ಈ ಅನುದಾನದ ಹೊರತಾಗಿಯೂ ರಾಜಸ್ವ ಕೊರತೆಯನ್ನು ಶೂನ್ಯವಾಗಿಸುವಲ್ಲಿ ವಿಫಲವಾಗಿರುವುದನ್ನು ಉಲ್ಲೇಖಿಸಿ ರಾಜಸ್ವ ಕೊರತೆ ಅನುದಾನವನ್ನು ತೆರಿಗೆ ಹಂಚಿಕೆಯ ಸೂತ್ರದಲ್ಲೇ ರಾಜ್ಯಗಳಿಗೆ ನೀಡಬೇಕೆಂದು ಪ್ರಸ್ತಾಪಿಸಿದರು.
ಇದಲ್ಲದೆ, ರಾಜಸ್ವ ಕೊರತೆ ಅನುದಾನಗಳನ್ನು ಅಂದಾಜಿಸಲು ಆಯೋಗವು ಪರಿಕಲ್ಪಿಸುವ ವೆಚ್ಚದ ಆದ್ಯತೆಗಳು ವ್ಯಕ್ತಿನಿಷ್ಠ ಮೌಲ್ಯಮಾಪನಗಳನ್ನು ಪ್ರತಿಬಿಂಬಿಸುತ್ತವೆ. ದುರದೃಷ್ಟವಶಾತ್, ಈ ಮೌಲ್ಯಮಾಪನಗಳು ಸಂಬಳ, ಪಿಂಚಣಿ ಮತ್ತು ಆಡಳಿತಾತ್ಮಕ ವೆಚ್ಚಗಳಿಗೆ ಹೋಲಿಸಿದರೆ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಭರಿಸುವ ವೆಚ್ಚವನ್ನು ಕಡಿಮೆ ಪ್ರಮಾಣದಲ್ಲಿ ಇರಿಸುತ್ತವೆ. ನಮ್ಮ ಸರ್ಕಾರವು ಎಲ್ಲರ ಕಲ್ಯಾಣವನ್ನು ಒತ್ತಿಹೇಳುವ ಗಾಂಧೀಜಿಯವರ ಸರ್ವೋದಯ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ. ಕಡಿಮೆ ಆದಾಯದ ಕುಟುಂಬಗಳನ್ನು ಸಬಲೀಕರಣಗೊಳಿಸುವ ಮೂಲಕ, ಸ್ಥಳೀಯ ಬೇಡಿಕೆಯನ್ನು ಉತ್ತೇಜಿಸುವ ಮತ್ತು ಸಮಗ್ರ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ರೂಪಿತವಾಗಿದೆ. ಆದ್ದರಿಂದ, ಹಣಕಾಸಿನ ಹಂಚಿಕೆಯಲ್ಲಿ ಮೌಲ್ಯಮಾಪನ ಮಾಡುವಾಗ ಈ ಕಲ್ಯಾಣ ಕಾರ್ಯಕ್ರಮಗಳ ಮೇಲಿನ ವೆಚ್ಚಗಳಿಗೆ ಹೆಚ್ಚಿನ ಆದ್ಯತೆ ನೀಡದೆ ಹೋದರೆ ಕನಿಷ್ಠ ಸಂಬಳ, ಪಿಂಚಣಿ ಮತ್ತು ಬಡ್ಡಿ ಪಾವತಿಗಳಂತಹ ಬದ್ಧ ವೆಚ್ಚಗಳಿಗೆ ಸಮಾನವಾಗಿ ಪರಿಗಣಿಸಬೇಕು.
ಕೇಂದ್ರ ಸರ್ಕರದ ವಿವೇಚನಾಧಾರಿತ ಅನುದಾನವಾಗಿರುವ ರಾಜ್ಯ ಕೇಂದ್ರಿತ ಅನುದಾನದ ಬದಲಾಗಿ ಒಟ್ಟು ಕೇಂದ್ರ ಸ್ವೀಕೃತಿಗಳ 0.3% ರಷ್ಟು ಅನುದಾನವನ್ನು ಸೂತ್ರ ಆಧಾರಿತ ಹಂಚಿಕೆಯ ಮೂಲಕ ರಾಜ್ಯಗಳಿಗೆ ನೀಡಬೇಕೆಂದು ಕರ್ನಾಟಕವು ಶಿಫಾರಸು ಮಾಡಿದೆ. ಆದಾಗ್ಯೂ, ಆಯೋಗವು ಅಂತಹ ನಿಬಂಧನೆಗಳನ್ನು ಮುಂದುವರಿಸಿದರೆ ಬೆಂಗಳೂರು ಮತ್ತು ಇತರ ನಿರ್ಣಾಯಕ ಯೋಜನೆಗಳಿಗೆ ಅನುದಾನಕ್ಕಾಗಿ ಮೂಲ ಜ್ಞಾಪಕ ಪತ್ರದಲ್ಲಿ ಸಲ್ಲಿಸಿರುವ ತನ್ನ ಪ್ರಸ್ತಾವನೆಯನ್ನು ಪುನರುಚ್ಚರಿಸಿದೆ.
ರಾಜ್ಯದ ಆರ್ಥಿಕ ಇಂಧನವಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿಗೆ ₹1.15 ಲಕ್ಷ ಕೋಟಿ ಹೂಡಿಕೆ ಬೆಂಬಲವನ್ನು ಕೋರಿದ ಸಿಎಂ, ನಗರ ಅಭಿವೃದ್ಧಿಗೆ ಕೇಂದ್ರದಿಂದ ನೇರ ಅನುದಾನ ನೀಡಬೇಕು ಎಂದು ಶಿಫಾರಸು ಮಾಡಿದರು.
“ಬೆಳವಣಿಗೆಗೆ ದಂಡವಲ್ಲ, ಪ್ರೋತ್ಸಾಹ ಬೇಕು. ಕರ್ನಾಟಕದ ಹಿತಸಾಧನೆಗೆ ನ್ಯಾಯಯುತ ಹಂಚಿಕೆ ಅನಿವಾರ್ಯ. ಬಲವಾದ ರಾಜ್ಯದಿಂದಲೇ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ” ಎಂದು ಆಯೋಗವನ್ನು ಒತ್ತಾಯಿಸಿದರು.














