ಮನೆ ರಾಜ್ಯ ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು..!

ಕೊಡಗಿನಲ್ಲಿ ನಿರಂತರ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲು..!

0

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಈ ಬಾರಿ ಮೇ ತಿಂಗಳಿನಿಂದಲ್ಲೇ ನಿರಂತರ ಮಳೆಯಾಗುತ್ತಿರುವುದರಿಂದ ನಾನಾ ರೀತಿಯ ಅವಾಂತರ ಮುಂದುವರೆದಿದೆ. ಅಲ್ಲದೆ ಸುರಿಯುತ್ತಿರುವ ಮಳೆಯ ಪರಿಣಾಮ ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಿನ ಹಲವಾರು ಭಾಗದಲ್ಲಿ ಕಾಫಿ ಬೆಳೆಗಳು ನೆಲಕಚ್ಚಿದೆ.

ಕಾಫಿ ತೋಟಗಳು ಸಂಪೂರ್ಣವಾಗಿ ಹಾಳಾಗಿದ್ದು ಈ ವರ್ಷ ಹಾಗೂ ಮುಂದಿನ ವರ್ಷಕ್ಕೆ ಬೆಳೆಯೇ ಇಲ್ಲದಂತಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ ಬೆಳೆಗಾರರ ಸ್ಥಿತಿಯನ್ನ ಅರಿತ ಕೊಡಗಿನ ಬಿಜೆಪಿ ನಿಯೋಗ ಕಾಫಿ ತೋಟಗಳಲ್ಲಿ ಸರ್ವೇ ಕಾರ್ಯ ನಡೆಸಿ ಕೇಂದ್ರ ಹಾಗೂ ರಾಜ್ಯ ‌ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ದೀರ್ಘಾವಧಿ ಮಳೆ ಆಗಿರುವುದರಿಂದ ಪ್ರಮುಖ ಬೆಳೆ ಕಾಫಿ ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳಿಗೂ ಕೊಳೆ ರೋಗದ ಸಮಸ್ಯೆ ಎದುರಾಗಿದೆ. ಅತಿಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಈಗಾಗಲೇ ಕಾಫಿ ಉದುರಲಾರಂಭಿಸಿದೆ.

ಇದರಿಂದ ಈ ಬಾರಿ ಜಿಲ್ಲೆಯಲ್ಲಿ ಕಾಫಿ ಉತ್ಪಾದನೆದು ಮೇಲೆ ಪರಿಣಾಮ ಬೀರಲಿದೆ. ಅಲ್ಲದೇ ಜಿಲ್ಲೆಯಲ್ಲಿ ಶೀತಗಾಳಿ ಹೆಚ್ಚಾಗಿರುವ ಪರಿಣಾಮ ತೋಟಗಾರಿಕಾ ಬೆಳೆಗಳ ಮೇಲೂ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಮುಖ್ಯವಾಗಿ ಕಾಫಿ ಬೆಳೆ ಗಾರರಿಗೆ ಬೆಳೆ ನಷ್ಟದ ಭೀತಿ ಎದುರಾಗಿದೆ.

ಕೊಡಗಿನ ಬಿಜೆಪಿ ನಾಯಕರು ಸೋಮವಾರಪೇಟೆ ತಾಲ್ಲೂಕು ಹಾಗೂ ಮಡಿಕೇರಿ ತಾಲೂಕಿನ ಹಲವಾರು ಗ್ರಾಮೀಣ ಭಾಗದ ಕಾಫಿ ತೋಟಗಳಿಗೆ ತೆರಳಿ ಕಾಫಿ ತೋಟಗಳ ಸರ್ವೇ ಕಾರ್ಯ ನಡೆಸಿದ್ದಾರೆ.

ಈ ಕುರಿತು ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಹಾಗೂ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತಾನಾಡಿ, ‘ಅತೀ ಹೆಚ್ಚು ಮಳೆಯಾಗಿರುವ ತೋಳೂರು ಶೆಟ್ಟಳ್ಳಿ, ಶಾಂತಳ್ಳಿ, ಬೆಟ್ಟದಳ್ಳಿ, ಹಮ್ಮಿಯಾಲ, ಮುಟ್ಟು, ಮುಕ್ಕೋಡ್ಲು, ಕಾಲೂರು, ಗಾಳಿಬೀಡು, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ಬಲ್ಲಮಾವಟಿ, ಕಕ್ಕಬ್ಬೆ ವಿಭಾಗಗಳಿಗೆ ಪಕ್ಷದ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ.

ಕಾಫಿಯೂ ಕೊಳೆ ರೋಗದ ಸಮಸ್ಯೆಗೆ ತುತ್ತಾಗಿದ್ದು, ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಿದ್ದೂ ಜಿಲ್ಲೆಯ ಶಾಸಕರಾಗಲಿ, ಉಸ್ತುವಾರಿ ಸಚಿವರಾಗಲಿ ಕಾಳಜಿ ವಹಿಸಿಲ್ಲವೆಂದು ಆರೋಪಿಸಿದ್ದಾರೆ. ಪ್ರಸ್ತುತ ಪರಿಸ್ಥಿಗಳ ನಡುವೆ ಬೆಳೆಗಾರಿಗೆ ತಲಾ 2 ಲಕ್ಷ ಪರಿಹಾರವನ್ನಾದರೂ ನೀಡಬೇಕೆಂದು ಆಗ್ರಹಿಸಿದ್ದಾರೆ.