ಮನೆ ಕಾನೂನು ಅನುಕಂಪದ ಉದ್ಯೋಗ: 90 ದಿನಗಳಲ್ಲಿ ಅರ್ಜಿ ಪರಿಗಣಿಸದಿದ್ದರೆ ವೇತನ ನೀಡಬೇಕು: ಹೈಕೋರ್ಟ್

ಅನುಕಂಪದ ಉದ್ಯೋಗ: 90 ದಿನಗಳಲ್ಲಿ ಅರ್ಜಿ ಪರಿಗಣಿಸದಿದ್ದರೆ ವೇತನ ನೀಡಬೇಕು: ಹೈಕೋರ್ಟ್

0

ಅನುಕಂಪದ ಆಧಾರದಲ್ಲಿ ಮೃತರ ಉತ್ತರಾಧಿಕಾರಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಮೂರು ತಿಂಗಳಲ್ಲಿ ಪರಿಗಣಿಸಬೇಕು. ಇಲ್ಲದಿದ್ದರೆ, ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ವೇತನ ಪಾವತಿಸುವ ಹೊಣೆ ಸಕ್ಷಮ ಪ್ರಾಧಿಕಾರದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅನುಕಂಪ ಆಧಾರದ ಉದ್ಯೋಗ ಅರ್ಜಿಗಳನ್ನು ಸರ್ಕಾರ ತಾತ್ಸಾರದಿಂದ ನೋಡುತ್ತಿದೆ. ಅರ್ಜಿಗಳನ್ನು ಪರಿಗಣಿಸಲು ಮೀನ ಮೇಷ ಎಣಿಸುತ್ತಿದೆ. ಎಂಬ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ನ್ಯಾಯಪೀಠ ತೀವ್ರ ಅಸಮಧಾನ ವ್ಯಕ್ತಪಡಿಸಿದೆ.

ಮೈಸೂರು ನಿವಾಸಿ ಎನ್.ಹೃತಿಕ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಸ್ತುತ ಹೈಕೋರ್ಟ್’ನಲ್ಲಿ ಇಂತಹ ಹಲವಾರು ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಅನುಕಂಪದ ಆಧಾರದ ನೌಕರಿಗೆ ಅರ್ಜಿ ಸಲ್ಲಿಸಿ ಸರ್ಕಾರಿ ಪ್ರಾಧಿಕಾರಗಳ ವಿಳಂಬ ಧೋರಣೆಯಿಂದ ಸಂತ್ರಸ್ತರಾದವರಿಗೆ ನ್ಯಾಯ ಸಿಗುವುದೆಂದು ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು.

ಇಂತಹ ಅರ್ಜಿಗಳನ್ನು ಪರಿಗಣಿಸದೆ ಬಾಕಿ ಉಳಿಸಿಕೊಂಡರೆ ಅನುಕಂಪದ ನೌಕರಿ ಒದಗಿಸಲು ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ನಾಗರಿಕ ಸೇವೆಗಳ (ಅನುಕಂಪದ ನೌಕರಿ) ನಿಯಮಗಳು-1996 ಖಂಡಿತವಾಗಿ ಸೋಲುತ್ತದೆ. ಇನ್ನೊಂದೆಡೆ ಮೃತ ನೌಕರನನ್ನು ಕಳೆದುಕೊಂಡ ಕುಟುಂಬ ಕೂಡ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಅನುಕಂಪದ ನೌಕರಿಗೆ ಅರ್ಜಿ ಸಲ್ಲಿಸಿದ ಮೂರು ತಿಂಗಳಲ್ಲಿ ವಿಲೇವಾರಿ ಮಾಡದಿದ್ದರೆ  ವೇತನ ನೀಡುವುದು ಸಕ್ಷಮ ಪ್ರಾಧಿಕಾರದ ಹೊಣೆ ಎಂದು ಆದೇಶ ನೀಡಿದ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರನ ಮನವಿಯನ್ನು ಎಂಟು ವಾರದಲ್ಲಿ ಇತ್ಯರ್ಥ ಮಾಡಿ ಕಾನೂನು ಪ್ರಕಾರ ಸೂಕ್ತ ಆದೇಶ ಹೊರಡಿಸಬೇಕು. ತಪ್ಪಿದರೆ ಸಕ್ಷಮ ಪ್ರಾಧಿಕಾರವು ಗ್ರೂಪ್-ಸಿ ಉದ್ಯೋಗಕ್ಕೆ ನೀಡುವ ವೇತನವನ್ನು ಅರ್ಜಿದಾರನಿಗೆ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿತು.

ಹಿಂದಿನ ಲೇಖನಮಂಡ್ಯದಲ್ಲಿ ಭಾರತ್ ಜೋಡೋ ಪಾದಯಾತ್ರೆ: ಸೋನಿಯಾ ಗಾಂಧಿ ಭಾಗಿ
ಮುಂದಿನ ಲೇಖನವೇತನ ಸಮಸ್ಯೆ: ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ನೀಡಿದ 108 ಆಂಬ್ಯುಲೆನ್ಸ್ ಚಾಲಕರು