ಮನೆ ಸುದ್ದಿ ಜಾಲ ವಿವಾಹಪೂರ್ವ ದೈಹಿಕ ಸಂಬಂಧಕ್ಕೆ ಸಮ್ಮತಿ ನೀಡಿದರೆ ಅದು ಕೆಟ್ಟ ಚಾರಿತ್ರ್ಯದ ಸೂಚಕವಲ್ಲ: ಸುಪ್ರೀಂ ಕೋರ್ಟ್ ಮಹತ್ವದ...

ವಿವಾಹಪೂರ್ವ ದೈಹಿಕ ಸಂಬಂಧಕ್ಕೆ ಸಮ್ಮತಿ ನೀಡಿದರೆ ಅದು ಕೆಟ್ಟ ಚಾರಿತ್ರ್ಯದ ಸೂಚಕವಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

0

ನವದೆಹಲಿ: ತೆಲಂಗಾಣ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮದುವೆಗೆ ಮುನ್ನ ಪರಸ್ಪರ ಸಮ್ಮತಿಯೊಂದಿಗೆ ದೈಹಿಕ ಸಂಬಂಧ ಹೊಂದಿರುವುದನ್ನು ವ್ಯಕ್ತಿಯ ಕೆಟ್ಟ ಚಾರಿತ್ರ್ಯಕ್ಕೆ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಅಭ್ಯರ್ಥಿಯ ತಾತ್ಕಾಲಿಕ ಆಯ್ಕೆಯನ್ನು ರದ್ದುಗೊಳಿಸಿದ್ದ ನಿರ್ಧಾರವನ್ನು ನ್ಯಾಯಾಲಯ ಅಮಾನ್ಯಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮನಮೋಹನ್ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠವು, ತೆಲಂಗಾಣ ರಾಜ್ಯ ಮಟ್ಟದ ಪೊಲೀಸ್ ನೇಮಕಾತಿ ಮಂಡಳಿ ಕೈಗೊಂಡಿದ್ದ ಕ್ರಮ ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದೆ.

2014ರಲ್ಲಿ ಅಭ್ಯರ್ಥಿಯ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣದಲ್ಲಿ, ಮದುವೆಯ ಭರವಸೆ ನೀಡಿ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿತ್ತು. ಬಳಿಕ ಈ ಪ್ರಕರಣವನ್ನು 2015ರಲ್ಲಿ ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲಾಗಿತ್ತು. ಅಭ್ಯರ್ಥಿಯು ತನ್ನ ಅರ್ಜಿಯಲ್ಲಿ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.

ಇಬ್ಬರು ಅವಿವಾಹಿತ ವಯಸ್ಕರ ನಡುವಿನ ಪರಸ್ಪರ ಸಮ್ಮತಿಯ ದೈಹಿಕ ಸಂಬಂಧವನ್ನು ವ್ಯಕ್ತಿಯ ನಡತೆ ಅಥವಾ ಚಾರಿತ್ರ್ಯದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ರೂಪಿಸಲು ಆಧಾರವಾಗಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಯಸ್ಕರು ತಮ್ಮ ಇಚ್ಛೆಯಂತೆ ಸಂಬಂಧ ಬೆಳೆಸಿಕೊಳ್ಳುವುದನ್ನು ನಿರ್ಬಂಧಿಸುವ ಯಾವುದೇ ಕಾನೂನು ಇಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರತಿಯೊಂದು ಪ್ರೇಮ ಸಂಬಂಧವೂ ಮದುವೆಯಲ್ಲಿ ಅಂತ್ಯಗೊಳ್ಳಬೇಕೆಂಬ ನಿಯಮ ಇಲ್ಲ. ಸಂಬಂಧವು ಮದುವೆಗೆ ಕಾರಣವಾಗಿಲ್ಲ ಎಂಬ ಒಂದೇ ಕಾರಣಕ್ಕೆ ಒಬ್ಬರು ಮತ್ತೊಬ್ಬರನ್ನು ವಂಚಿಸಿದ್ದಾರೆ ಎಂದು ತೀರ್ಮಾನಿಸುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಭ್ಯರ್ಥಿ ಮತ್ತು ದೂರುದಾರರು ಹಲವು ವರ್ಷಗಳಿಂದ ಪರಿಚಿತರಾಗಿದ್ದು, ನೆರೆಹೊರೆಯವರಾಗಿದ್ದರು ಎಂಬ ಅಂಶವನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಪ್ರಕರಣದ ಇತ್ಯರ್ಥಕ್ಕೆ ಒತ್ತಡ ಹೇರಲಾಗಿದೆ ಎಂಬುದನ್ನು ತೋರಿಸುವ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದೆ.

ವಂಚನೆ ಆರೋಪವನ್ನು ದೂರುದಾರರ ಸಾಕ್ಷ್ಯದಿಂದಲೇ ಸಾಬೀತುಪಡಿಸಬೇಕಾಗುತ್ತದೆ. ಆದರೆ ದೂರುದಾರರು ಪ್ರಕರಣವನ್ನು ಮುಂದುವರಿಸಲು ಮುಂದೆ ಬರದ ಹಿನ್ನೆಲೆಯಲ್ಲಿ, ಅಭ್ಯರ್ಥಿಯ ಚಾರಿತ್ರ್ಯವನ್ನು ಪ್ರಶ್ನಿಸಲು ನೇಮಕಾತಿ ಮಂಡಳಿಗೆ ಯಾವುದೇ ಸೂಕ್ತ ಆಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.