ಮೈಸೂರು: ನಗರದ ನರಸಿಂಹ ರಾಜ ಕ್ಷೇತ್ರದ ವಾರ್ಡ್ ಸಂಖ್ಯೆ 14ರ ಉದಯಗಿರಿ ಪಿಎನ್ ಟಿ ಕ್ವಾಟ್ರಸ್ ಹಾಗೂ ದಲಿತ ಸಮುದಾಯದ ರುದ್ರಭೂಮಿಗೆ ಹೋಗುವ ಸಾರ್ವಜನಿಕರ ರಸ್ತೆಯನ್ನು ಬಂದ್ ಮಾಡಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ರುದ್ರಭೂಮಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿ, ಸುಮಾರು 70 ಮಳಿಗೆಗಳನ್ನು ನಿರ್ಮಿಸಲಾಗಿದೆ.

ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಸಾರ್ವಜನಿಕ ರಸ್ತೆ ಹಾಗೂ ಫುಟ್ ಪಾತ್ ಗಳಲ್ಲಿ ಯಾವುದೇ ಕಟ್ಟಡಗಳನ್ನು ಹಾಗೂ ಯಾವುದೇ ಚಟುವಟಿಕೆಗಳನ್ನು ಮಾಡಬಾರದೆಂದು ಆದೇಶವಿದ್ದರೂ ಸಾರ್ವಜನಿಕರ ರಸ್ತೆಯಲ್ಲಿ ಮಳಿಗೆಗಳನ್ನು ನಿರ್ಮಿಸಿರುತ್ತಾರೆ.
ಸರ್ಕಾರದ 2017ರ ಕರ್ನಾಟಕ ರಾಜ್ಯ ಸಂರಕ್ಷಣಾ ಪ್ರಾಧಿಕಾರ ಅಧೀನ 2017 ಸಂಖ್ಯೆ 45ರ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಸಾರ್ವಜನಿಕರ ರಸ್ತೆಯ ಮೇಲಿರುವ ಕಟ್ಟಡಗಳನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಅನಧಿಕೃತ ಕಟ್ಟಡ ನಿರ್ಮಿಸಿರುವ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಮಹಾಪೌರರಾದ ಎಸ್.ಸತೀಶ್(ಸಂದೇಶ್ ಸ್ವಾಮಿ) ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.














