ಬೀದರ್: ಕಟ್ಟಿತುಗಾಂವ್ ಗ್ರಾಮದ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ (ಜ.03) ನಗರಕ್ಕೆ ಆಗಮಿಸಿದ್ದು, ತನಿಖೆಯನ್ನು ಆರಂಭಿಸಿದೆ.
ಟೆಂಡರ್ ವಂಚನೆ ಮತ್ತು ಕೊಲೆ ಬೆದರಿಕೆಯಿಂದ ನೊಂದು ಗುತ್ತಿಗೆದಾರ್ ಸಚಿನ್ ಕಳೆದ ಡಿ. 26 ರಂದು ಡೆತ್ ನೋಟ್ ಬರೆದಿಟ್ಟು, ನಗರದ ಬಸವೇಶ್ವರ ವೃತ್ತ ಬಳಿಯ ರೈಲ್ವೆ ಹಳಿ ಮೇಲೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆದರೆ, ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಿತ್ತು. ಈ ಹಿನ್ನೆಲೆ ಶುಕ್ರವಾರ ಸಿಐಡಿ ಡಿವೈಎಸ್.ಪಿ ಸುಲೇಮನ್ ತಹಸೀಲ್ದಾರ್ ನೇತೃತ್ವದ ತಂಡ ಬೀದರ್ ಗೆ ಆಗಮಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ನಂತರ ರೈಲ್ವೆ ಠಾಣೆಗೆ ಭೇಟಿ ನೀಡಿದೆ. ಈವರೆಗೆ ನಡೆಸಿರುವ ತನಿಖೆಯ ವರದಿಯನ್ನು ಪಡೆದಿದೆ.
ತದನಂತರ ಆತ್ಮಹತ್ಯೆ ಘಟನಾ ಸ್ಥಳಕ್ಕೆ ತೆರಳಿದ ಅಧಿಕಾರಿಗಳ ತಂಡ ಜಾಗವನ್ನು ಪರಿಶೀಲಿಸಿದೆ.














