ಮನೆ ಕಾನೂನು ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

0

ಬೀದರ್: ಟೆಂಡರ್ ವಂಚನೆ ಮತ್ತು ಜೀವ ಬೆದರಿಕೆ ಕಾರಣ ಯುವ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ‌ ಪ್ರಕರಣ ಸಂಬಂಧ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಆರೋಪ ಹಿನ್ನಲೆ‌ ಇಲ್ಲಿನ ಗಾಂಧಿ ಗಂಜ್ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತ್ತುಗೊಳಿಸಲಾಗಿದೆ.

Join Our Whatsapp Group

ಮುಖ್ಯಪೇದೆ ರಾಜೇಶ್‌ ಚೆಲ್ವಾ ಹಾಗೂ ಪೇದೆ ಶಾಮಲಾ ಅಮಾನತುಗೊಂಡವರು.

ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್‌ ಗ್ರಾಮದ ಯುವ ಗುತ್ತಿಗೆದಾರ ಸಚಿನ್‌ ಪಾಂಚಾಳ್‌ (26) ಅವರು ಗುರುವಾರ (ಡಿ.26) ಡೆತ್‌ನೋಟ್‌ ಬರೆದಿಟ್ಟು, ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿ, ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಟೆಂಡರ್ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ‌ ಪಡೆದಿದ್ದಲ್ಲದೆ, ಕೋಟಿ ರೂ. ಕೊಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ಮತ್ತು ಗ್ಯಾಂಗ್ ಬೆದರಿಕೆ ಹಾಕಿದ್ದರು ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದರು.

ಸಚಿನ್ ನಾಪತ್ತೆಯಾಗಿದ್ದನ್ನು ನೋಡಿ ಗಾಬರಿಗೊಂಡ ಆತನ ಕುಟುಂಬಸ್ಥರು ಗಾಂಧಿ ಗಂಜ್‌ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದರು. ಈ ವೇಳೆ ಠಾಣೆಯಲ್ಲಿದ್ದ ಪೇದೆಗಳಾದ ರಾಜೇಶ್‌ ಮತ್ತು ಶಾಮಲಾ ಅವರು ದೂರು ಸ್ವೀಕರಿಸುವಲ್ಲಿ ನಿರ್ಲಕ್ಷ್ಯ ತೋರಿ ಕರ್ತವ್ಯಲೋಪ ಎಸಗಿದ್ದರು. ಈ ಕಾರಣಕ್ಕಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಎಸ್.ಪಿ‌ ಪ್ರದೀಪ ಗುಂಟಿ‌ ಖಚಿತಪಡಿಸಿದ್ದಾರೆ.