ಮನೆ ರಾಜ್ಯ ಪತ್ರಕರ್ತರ ಮಾನ್ಯತಾ ಕಾರ್ಡ್: ಲೋಪ ಸರಿಪಡಿಸಿದ ವಾರ್ತಾ ಇಲಾಖೆ

ಪತ್ರಕರ್ತರ ಮಾನ್ಯತಾ ಕಾರ್ಡ್: ಲೋಪ ಸರಿಪಡಿಸಿದ ವಾರ್ತಾ ಇಲಾಖೆ

0
ಸಾಂದರ್ಭಿಕ ಚಿತ್ರ

ಬೆಂಗಳೂರು (Bengaluru)-ಪತ್ರಕರ್ತರಿಗೆ ಕೊಡ ಮಾಡುವ ಮಾನ್ಯತಾ (accreditation) ಕಾರ್ಡ್ ನಲ್ಲಿ ಆಗಿದ್ದ ಲೋಪವನ್ನು  ಕೂಡಲೇ ಸರಿಪಡಿಸಿ ಹಿಂದಿನ ಮಾದರಿಯಲ್ಲಿ ಕಾರ್ಡ್ ಕೊಡುವುದಾಗಿ ಭರವಸೆ ನೀಡಿದ್ದ ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಅವರು, ಎಲ್ಲಾ ಜಿಲ್ಲೆಗೂ ಲೋಪ ಸರಿಪಡಿಸಿರುವ  ಹೊಸ ಕಾರ್ಡ್ ರವಾನಿಸಿದ್ದಾರೆ.

ಮಾರ್ಚ್‌ 8 ರಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (KUWJ)ದ ಅಧ್ಯಕ್ಷ ಶಿವಾನಂದ ತಗಡೂರು ಅವರು ವಾರ್ತಾ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ, ಅಕ್ರಿಡಿಟೇಶನ್ ಕಾರ್ಡ್ ನಲ್ಲಿ ಜಿಲ್ಲೆಗೆ ಮಾತ್ರ ಸೀಮಿತ ಎನ್ನುವುದನ್ನು ಕೂಡಲೇ ತೆಗೆಯಬೇಕು. ಮೊದಲಿದ್ದಂತೆ ಕಾರ್ಡ್ ನೀಡಬೇಕು ಒತ್ತಾಯಿಸಿದ್ದರು.

ಪತ್ರಕರ್ತರಿಗೆ ನೀಡುವ ಮಾನ್ಯತಾ ಕಾರ್ಡ್ ಎಲ್ಲರಿಗೂ ಒಂದೇ ಮಾದರಿಯಲ್ಲಿ ಇರುತಿತ್ತು. ಆದರೆ, ಈ ಬಾರಿ  ಕಾರ್ಡನ್ನು ಜಿಲ್ಲೆಗೆ ಮಾತ್ರ ಸೀಮಿತ ಮಾಡಿರುವ ಲೋಪದ ಬಗ್ಗೆ ಕೆಯುಡಬ್ಲ್ಯೂಜೆ ಗಮನ ಸೆಳೆದಿದ್ದು ಅಲ್ಲದೆ, ಈ ಬಗ್ಗೆ ಕೆಲ ಜಿಲ್ಲೆಗಳಿಂದ ಬಂದಿರುವ ದೂರುಗಳನ್ನು ಆಯುಕ್ತರ ಗಮನಕ್ಕೆ ತರಲಾಗಿತ್ತು. ಸರಿಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಕೆಯುಡಬ್ಲ್ಯೂಜೆ ಎಚ್ಚರಿಕೆ ನೀಡಿತ್ತು.

ಲೋಪಗಳಿರುವ ಕಾರ್ಡ್ ಗಳನ್ನು ವಾಪಸ್ಸು ಪಡೆದುಕೊಳ್ಳುವಂತೆ ಅಂದೇ ಜಿಲ್ಲಾ ವಾರ್ತಾಧಿಕಾರಿಗಳಿಗೆ ಸೂಚನೆ ನೀಡಿ, ಹೊಸ ಕಾರ್ಡ್ ಕಳುಹಿಸಿಕೊಡುವುದಾಗಿ ಆಯುಕ್ತರಾದ ಡಾ.ಹರ್ಷ ಅವರು ಭರವಸೆ ನೀಡಿದ್ದರು. ಅದರಂತೆ ಇದೀಗ ಲೋಪ ಸರಿಪಡಿಸಿ ಹೊಸ ಮಾನ್ಯತಾ ಕಾರ್ಡ್‌ ರವಾನಿಸಿರುವ ಡಾ.ಹರ್ಷ ಅವರಿಗೆ ಕೆಯುಡಬ್ಲ್ಯೂಜೆ ಅಭಿನಂದನೆ ಸಲ್ಲಿಸಿದೆ.

ಹೊಸದಾಗಿ ಕಳುಹಿಸಿದ ಮಾನ್ಯತಾ ಕಾರ್ಡ್ ಗಳನ್ನು ಆಯಾ ಜಿಲ್ಲೆಯ ವಾರ್ತಾ ಇಲಾಖೆಯಲ್ಲಿ ಪಡೆದುಕೊಂಡು, ಈ ಹಿಂದೆ ನೀಡಿದ್ದ ಮಾನ್ಯತೆ ಕಾರ್ಡ್ ವಾಪಸ್ಸು ನೀಡುವಂತೆ ಕೆಯುಡಬ್ಲ್ಯೂಜೆ ವಿನಂತಿಸಿದೆ.