ಮನೆ ರಾಜಕೀಯ ಕೋವಿಡ್​ ಹಗರಣ: ಕ್ಯಾಬಿನೆಟ್‌ ಸಬ್ ಕಮಿಟಿ ಜೊತೆ ಎಸ್‌ಐಟಿ ರಚನೆಗೆ ಸಂಪುಟ ಸಭೆ ತೀರ್ಮಾನ

ಕೋವಿಡ್​ ಹಗರಣ: ಕ್ಯಾಬಿನೆಟ್‌ ಸಬ್ ಕಮಿಟಿ ಜೊತೆ ಎಸ್‌ಐಟಿ ರಚನೆಗೆ ಸಂಪುಟ ಸಭೆ ತೀರ್ಮಾನ

0

ಬೆಂಗಳೂರು: ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ ಮಾಡಲಾಗಿದೆ. ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚೆ ಮಾಡಲಾಗಿದೆ. ಪ್ರಮುಖವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್​ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್‌ ಸಬ್ ಕಮಿಟಿ ಜೊತೆ ಎಸ್‌ಐಟಿ ರಚನೆಗೆ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

Join Our Whatsapp Group

ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌​ಕೆ ಪಾಟೀಲ್​, ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಕುನ್ಹಾ ಆಯೋಗ ಭಾಗಶಃ ವರದಿ ನೀಡಿದೆ. ಅದರ ಮೇಲೆ ಕೆಲವು ನಿರ್ಣಯ ತೆಗೆದುಕೊಂಡಿದ್ದೇವೆ. ಇದರಲ್ಲಿ ಕ್ರಿಮಿನಲ್ ಕಂಟೆಂಟ್ ಇರುವುದರಿಂದ ಎಸ್ಐಟಿ ರಚನೆಗೆ ತೀರ್ಮಾನ ಮಾಡಿದ್ದೇವೆ ಹಾಗೂ ಕ್ಯಾಬಿನೆಟ್ ಸಬ್ ಕಮಿಟಿ ಕೂಡ ರಚನೆ ಮಾಡಲು ತೀರ್ಮಾ‌ನ ಮಾಡಿದ್ದೇವೆ. ರಿಕವರಿ ಪ್ರೊಸೀಡಿಂಗ್ಸ್​ ತಕ್ಷಣ ಪ್ರಾರಂಭ ಮಾಡಬೇಕು ಎಂದು ತಿಳಿಸಿದರು.

11 ಸಂಪುಟಗಳಲ್ಲಿ ವರದಿ ನೀಡಿದೆ. 7,22, 364 ಕೋಟಿ ರೂ. ಮೊತ್ತದ ಅವ್ಯವಹಾರದ ತನಿಖೆ ನಡೆದಿದೆ. 500 ಕೋಟಿ ರೂ. ಮೊತ್ತದ ವಸೂಲಾತಿಗೆ ಆಯೋಗ ಶಿಫಾರಸು ಮಾಡಿದೆ. ಬಿಬಿಎಂಪಿ ನಾಲ್ಕು ವಲಯಗಳ ಹಾಗೂ 31 ಜಿಲ್ಲೆಗಳ ವರದಿ ಸಂಗ್ರಹ ಬಾಕಿ ಇದೆ. 55 ಸಾವಿರ ಕಡತಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಪಡೆದು ಪರಿಶೀಲಿಸಿ ವರದಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಹಗರಣದಲ್ಲಿ ಭಾಗಿಯಾದ ಕಂಪನಿಗಳು, ಸಂಸ್ಥೆಗಳನ್ನು ಬ್ಲ್ಯಾಕ್ ಲಿಸ್ಟ್​ಗೆ ಸೇರಿಸಲು ನಿರ್ಧಾರ ಮಾಡಲಾಗಿದೆ. ಎಲ್ಲೆಲ್ಲಿ ಕ್ರಿಮಿನಲ್ ಎಲಿಮೆಂಟ್ ಇದೆ ಎಸ್ಐಟಿ ಅದರ ಬಗ್ಗೆ ಗಮನ ಹರಿಸುತ್ತದೆ. ಯಾರ ಪಾತ್ರ ಏನೂ ಎಂಬುದು ಎಸ್ಐಟಿ ತನಿಖೆಯಲ್ಲಿ ಗೊತ್ತಾಗುತ್ತದೆ. ಪೂರ್ಣ ವರದಿ ಬಂದ ಮೇಲೆ ಏನು ಅವ್ಯವಹಾರ, ಯಾರು ಪಾಲುದಾರರು ಗೊತ್ತಾಗುತ್ತದೆ ಎಂದಿದ್ದಾರೆ.