ಚನ್ನಪಟ್ಟಣ (ರಾಮನಗರ): ಸಂಪದ್ಭರಿತವಾದ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಹಾರವನ್ನು ಹಿಂದಿಕ್ಕುವ ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ. ಆ ರೀತಿ ಆಗಲೇಬೇಕು ಎಂದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಅಕ್ಕೂರಿನಲ್ಲಿ ಗುರುವಾರ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ರಾಜ್ಯವನ್ನು ಉಳಿಸುವವರು ಯಾರು ಎಂಬುದನ್ನು ಜನ ಮೊದಲು ಅರ್ಥ ಮಾಡಿಕೊಳ್ಳಬೇಕು. ಬುದ್ಧಿವಂತರಾಗಿ ತೀರ್ಮಾನ ಕೈಗೊಳ್ಳಬೇಕು’ ಎಂದರು.
ರಾಜ್ಯ ಸರ್ಕಾರ ಹಾಗೂ ಬಜೆಟ್ ನಿರೀಕ್ಷೆ ಕುರಿತು ಚರ್ಚಿಸುವುದರಲ್ಲಿ ಅರ್ಥವೇ ಇಲ್ಲ. ಆ ರೀತಿ ಮಾಡುವುದು ಕೆಸರಿನ ಮೇಲೆ ಕಲ್ಲು ಎಸೆದಂತೆ. ಎಸ್ಸಿ ಮತ್ತು ಎಸ್ಟಿ ಸಮುದಾಯದ ಪರಿಸ್ಥಿತಿ ಏನಾಗಿದೆ? ಜನಸಾಮಾನ್ಯರ ಕೆಲಸಗಳು ಯಾವ ರೀತಿ ನಡೆಯುತ್ತಿವೆ ಎಂಬುದನ್ನು ನೀವೇ ಗಮನಿಸಬೇಕು. ಕಳೆದ ಎರಡು ವರ್ಷಗಳಿಂದ ಇವರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ಜನರಿಗೂ ಬೇಕಿಲ್ಲ
ಸರ್ಕಾರ ವೈಫಲ್ಯಗಳ ಕುರಿತ ಚರ್ಚೆ ಜನರಿಗೇ ಬೇಕಿಲ್ಲ. ಬಸ್ ಟಿಕೆಟ್, ಮೆಟ್ರೊ ಪ್ರಯಾಣ ದರ ಏರಿಕೆ ಮಾಡಿದರೂ ಜನ ತಲೆ ಕೆಡಿಸಿಕೊಂಡಿಲ್ಲ. ಇದೀಗ ವಿದ್ಯುತ್ ಮೀಟರ್ ದರ ಏರಿಕೆಗೆ ಮುಂದಾಗಿದ್ದಾರೆ. ಸರ್ಕಾರದ ಅಕ್ರಮಗಳ ಕುರಿತ ಚರ್ಚೆ ಜನರಿಗೂ ಬೇಡವಾಗಿದೆ. ಹೀಗಿದ್ದಾಗ ವಿರೋಧ ಪಕ್ಷಗಳು ಏನು ಮಾಡುತ್ತವೆ. ಗ್ಯಾರಂಟಿ ಯೋಜನೆಗಳಿಂದ ಜನ ನೆಮ್ಮದಿಯಾಗಿರಬೇಕಲ್ಲವೆ?’ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.
ಚನ್ನಪಟ್ಟಣ ಕ್ಷೇತ್ರಕ್ಕೆ ನಾನು ಏನು ಮಾಡಿದ್ದೇನೆ ಎಂದು ಕೇಳುವವರು ಎರಡು ವರ್ಷದಿಂದ ಏನು ಮಾಡಿದ್ದಾರೆ? ಅವರ ಯಾವ ಸಾಕ್ಷಿಗುಡ್ಡೆ ಹಾಕಿದ್ದಾರೆ ಎಂಬುದನ್ನು ಮೂರ್ನಾಲ್ಕು ತಿಂಗಳಿಂದ ನೋಡುತ್ತಿದ್ದೇನೆ. ಅಕ್ಕೂರು ಕೆರೆಗೆ ನೀರು ಬಂದಿದೆಯೇ? ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅವರ್ಯಾರೊ ಕೇಳುತ್ತಾರೆ ಎಂದು ನಾನು ಕೆಲಸ ಮಾಡುವುದಿಲ್ಲ’ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಮೀಸಲಾತಿ ಕೊಟ್ಟು ಏನು ಉಪಯೋಗ?
ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟು ಏನು ಉಪಯೋಗ? ಮೀಸಲಾತಿ ಚರ್ಚೆಯನ್ನು ಮತ ಗಳಿಕೆಗಾಗಿ ನಡೆಸಬಾರದು. ಜನರಿಗೆ ಅಭಿವೃದ್ಧಿ ಬೇಕೇ ಹೊರತು ಮೀಸಲಾತಿಯಲ್ಲ. ಒಂದು ವೇಳೆ ಕೊಟ್ಟರೂ ಅಲ್ಲೂ ಪರ್ಸೆಂಟೇಜ್ ತೆಗೆದುಕೊಳ್ಳುತ್ತಾರೆ. ನಾನು ಎರಡು ಸಲ ಮುಖ್ಯಮಂತ್ರಿಯಾಗಿದ್ದಾಗ ಗುತ್ತಿಗೆದಾರರಿಗೆ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುತ್ತಿದ್ದೆ. ಆಗ ಯಾವ ಗುತ್ತಿಗೆದಾರರು ಸಹ ಬಂದು ನನಗೆ ಪರ್ಸೆಂಟೇಜ್ ಕೊಟ್ಟಿರಲಿಲ್ಲ. ನಾನಿದ್ದಾಗ ಈ ಪರ್ಸೆಂಟೇಜ್ ಚರ್ಚೆಯೇ ನಡೆದಿರಲಿಲ್ಲ’ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದಕ್ಷಿಣ ಜಿಲ್ಲೆಗೂ ಕೇಂದ್ರಕ್ಕೂ ಏನು ಸಂಬಂಧ?
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡದಂತೆ ಪತ್ರ ಬರೆದು ನೀವು ಅಡ್ಡಗಾಲು ಹಾಕುತ್ತಿದ್ದೀರಿ?’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಸೇರಿದಂತೆ ಯಾವ ಜಿಲ್ಲೆ ಬೇಕಾದರೂ ಮಾಡಲಿ. ಬೇಡ ಎಂದು ಹಿಡಿದುಕೊಂಡಿರುವವರು ಯಾರು? ದಕ್ಷಿಣ ಜಿಲ್ಲೆ ಮಾಡಿ ಏನು ಸಾಧಿಸುತ್ತಾರೆ? ಇರುವುದನ್ನೇ ನೆಟ್ಟಗೆ ಮಾಡಲು ಇವರ ಕೈಯಲ್ಲಿ ಆಗುತ್ತಿಲ್ಲ. ಇಷ್ಟಕ್ಕೂ ಜಿಲ್ಲೆ ಹೆಸರು ಬದಲಾವಣೆ ಮಾಡದಂತೆ ನಾನು ಯಾರಿಗೂ ಲೆಟರ್ ಕೊಟ್ಟಿಲ್ಲ. ಜಿಲ್ಲೆ ಹೆಸರು ಬದಲಾವಣೆಗೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ? ಜಿಲ್ಲೆ ಮಾಡುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ. ಅವಿವೇಕಿಗಳು ಆಡುವ ಮಾತಿಗೆ ನಾನು ಪ್ರತಿಕ್ರಿಯಿಸುವುದಿಲ್ಲ’ ಎಂದರು.














