ವಿಜಯನಗರ, ಜನವರಿ 24: ವಿಜಯನಗರ ಮತ್ತು ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ ನ ಕೆಲವು ಶಾಖೆಗಳಲ್ಲಿ ಗ್ರಾಹಕರು ತಮ್ಮ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎಂದು ದೂರುಗಳನ್ನು ಸಲ್ಲಿಸಿದ ನಂತರ ದೊಡ್ಡ ಮೊತ್ತದ ಹಣ ದರೋಡೆಯಾಗಿರುವುದು ಪತ್ತೆಯಾಗಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅಪರಾಧಿಯು ಬ್ಯಾಂಕ್ ನ ಆರ್ ಟಿಜಿಎಸ್ /ನೆಫ್ಟ್ ವಹಿವಾಟು ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಾನೆ.
ಬಿಡಿಸಿಸಿ ಬ್ಯಾಂಕ್ ನಿಂದ ಐಡಿಬಿಐ ಬ್ಯಾಂಕ್ ಗೆ ವಾಡಿಕೆಯಂತೆ ಹಣ ವರ್ಗಾವಣೆಯ ಸಮಯದಲ್ಲಿ, 2025 ರ ಜನವರಿ 10 ರಂದು ಹ್ಯಾಕರ್ಗಳು ಎಕ್ಸ್ಎಂಎಲ್ ಫೈಲ್ಗಳಲ್ಲಿನ ಖಾತೆ ಸಂಖ್ಯೆಗಳು ಮತ್ತು ಐಎಫ್ಎಸ್ಸಿ ಕೋಡ್ಗಳನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದರು ಎಂಬುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಫಲಾನುಭವಿಗಳ ಹೆಸರುಗಳು ಬದಲಾಗದೆ ಉಳಿದಿದ್ದರೂ, ಯಾರ ಖಾತೆಗೆ ಹಣ ವರ್ಗಾವಣೆಯಾಗಬೇಕಿತ್ತೋ ಅವುಗಳ ಬದಲಿಗೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿನ 25 ವಿಭಿನ್ನ ಖಾತೆಗಳಿಗೆ ಹಣ ಜಮೆ ಆಗಿರುವುದು ಗೊತ್ತಾಗಿದೆ.
ಜನವರಿ 10 ರಿಂದ ಆನ್ಲೈನ್ ಹಣ ವರ್ಗಾವಣೆಗಳು ಉದ್ದೇಶಿತ ಗ್ರಾಹಕರ ಖಾತೆಗಳಿಗೆ ಜಮೆಯಾಗಿಲ್ಲ ಎಂಬ ಬಗ್ಗೆ ಹಲವು ಶಾಖೆಗಳು ವರದಿ ಮಾಡಿದ ನಂತರ ಜನವರಿ 13ರಂದು ಆನ್ ಲೈನ್ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. 5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಹಿವಾಟುಗಳು ಇತರ ಖಾತೆಗಳಿಗೆ ಜಮೆ ಆಗಿರುವುದು ಬ್ಯಾಂಕ್ನ ತನಿಖೆಯಿಂದ ತಿಳಿದುಬಂದಿದೆ.
ಘಟನೆ ಬೆಳಕಿಗೆ ಬಂದ ತಕ್ಷಣವೇ ಬ್ಯಾಂಕ್ ತನ್ನ ಆರ್ ಟಿಜಿಎಸ್/ನೆಫ್ಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಹೊಸಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ನಂತರ ಅವರು ಪ್ರಕರಣವನ್ನು ಬಳ್ಳಾರಿ ಸಿಇಎನ್ (ಸೈಬರ್ ಎಕನಾಮಿಕ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಕಂಪ್ಯೂಟರ್ ಮೂಲಗಳನ್ನು ಬಳಸಿಕೊಂಡು ವಂಚನೆ ಎಸಗುವುದು ಮತ್ತು ವಂಚನೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತ್ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.














