ಮನೆ ಸಾಹಿತ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್.ನಾಗಭೂಷಣ ನಿಧನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ.ಎಸ್.ನಾಗಭೂಷಣ ನಿಧನ

0

ಶಿವಮೊಗ್ಗ(Shivamogga): ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಿ.ಎಸ್.ನಾಗಭೂಷಣ್ (70) ಬುಧವಾರ ರಾತ್ರಿ ನಿಧನರಾಗಿದ್ದಾರೆ.

ನಾಗಭೂಷಣ್ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ತಿಮ್ಮಸಂದ್ರದವರು. ಸದ್ಯ ಶಿವಮೊಗ್ಗ ವಿನೋಬನಗರದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದು, ಪತ್ನಿ ಸವಿತಾ ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ 1952 ಫೆಬ್ರವರಿ 1ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ 1981ರವರೆಗೆ ಸೇವೆ ಸಲ್ಲಿಸಿದ್ದರು. ಆ ನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದ ಅವರು, ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದರು.

ಕೃತಿಗಳು: ಇಂದಿಗೆ ಬೇಕಾದ ಗಾಂಧಿ, ಲೋಹಿಯಾ ಜೊತೆಯಲ್ಲಿ, ರೂಪ ರೂಪಗಳನು ಧಾಟಿ, ಕುವೆಂಪು ಒಂದು ಪುನರನ್ವೇಷಣೆ, ಕುವೆಂಪು ಸಾಹಿತ್ಯ ದರ್ಶನ, ಜಯಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ, ನಮ್ಮ ಶಾಮಣ್ಣ, ಕನ್ನಡದ ಮನಸು ಮತ್ತು ಇತರ ಲೇಖನಗಳು ಹಾಗೂ ಕಾಲಕ್ರಮ, ಗಮನ, ಅನೇಕ, ಈ ಭೂಮಿಯಿಂದ ಆ ಆಕಾಶದವರೆಗೆ, ಮರಳಿ ಬರಲಿದೆ ಸಮಾಜವಾದ, ವಸಿಷ್ಠರು ಮತ್ತು ವಾಲ್ಮೀಕಿಯರು, ಹಣತೆ (ಜಿಎಸ್ಸೆಸ್ ಅಭಿನಂದನೆ ಗ್ರಂಥ), ಗಾಂಧಿ ಕಥನ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭ್ಯವಾಗಿದೆ.ನೇರ ನಡೆ,ನುಡಿ,ನಿಷ್ಠುರ ವ್ಯಕ್ತಿ ತ್ವದ ಡಿಎಸ್ ಎನ್ ಸಾರ್ವಜನಿಕ ಬದುಕಿನಲ್ಲಿ ತೋರಬೇಕಾದ ಬದ್ದತೆ,ಪ್ರಾಮಾಣಿಕತೆಗೆ ಮಾದರಿಯಾಗಿದ್ದರು.

ಹಿಂದಿನ ಲೇಖನಇಂದು ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
ಮುಂದಿನ ಲೇಖನಗೃಹ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌​ ದರ ಏರಿಕೆ: ಇಂದಿನಿಂದಲೇ ಜಾರಿ