ಚಿಕ್ಕೋಡಿ : ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ, ಕರುಳಬಳ್ಳಿ ಸಂಬಂಧವನ್ನ ತಂದೆ ಕತ್ತರಿಸಿಕೊಂಡಿದ್ದಾರೆ. ಶಿವಗೌಡ ಪಾಟೀಲ್ ಎಂಬವರಿಗೆ ನಾಲ್ಕು ಹೆಣ್ಣುಮಕ್ಕಳಿದ್ದರು. ಕೊನೆಯ ಮಗಳು, ಅದೇ ಗ್ರಾಮದ ಯುವಕನನ್ನು ಪ್ರೀತಿಸಿ ಆತನೊಂದಿಗೆ ಓಡಿಹೋಗಿದ್ದಳು.
ಮೊದಲಿಗೆ ಶಿವಗೌಡ ಅವರು ಮಗಳು ಕಾಣೆಯಾಗಿದ್ದಾಳೆ ಎಂದು ರಾಯಭಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಗಳು ಓಡಿಹೋಗಿದ್ದಾಳೆ ಎಂಬ ವಿಚಾರ ತಿಳಿದ ತಂದೆ ಮನನೊಂದಿದ್ದರು.
ಬಳಿಕ ನನ್ನ ಮಗಳು ನಮ್ಮ ಪಾಲಿಗೆ ಸತ್ತಳೆಂದು, ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಯಿಸಿ ಭೋಜನ ಹಾಕಿಸಿ, ಆಕೆಯ ತಿಥಿ ಕಾರ್ಯವನ್ನು ಮಾಡಿ ಮುಗಿಸಿದ್ದಾರೆ ಎಂದು ಹೇಳಲಾಗಿದೆ.















