ಮನೆ ರಾಜ್ಯ ಡಿಸಿ, ಎಸ್​ಪಿ, ಸಿಇಒ ಯಾರನ್ನೂ ಮೆಚ್ಚಿಸಲು ಕೆಲಸ ಮಾಡಲ್ಲ: ಗೃಹ ಸಚಿವ ಜಿ. ಪರಮೇಶ್ವರ್

ಡಿಸಿ, ಎಸ್​ಪಿ, ಸಿಇಒ ಯಾರನ್ನೂ ಮೆಚ್ಚಿಸಲು ಕೆಲಸ ಮಾಡಲ್ಲ: ಗೃಹ ಸಚಿವ ಜಿ. ಪರಮೇಶ್ವರ್

0

ತುಮಕೂರು: ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್​ ಸಿಇಒ ಅವರು ಯಾರನ್ನೂ ಮೆಚ್ಚಿಸಲು ಕೆಲಸ ಮಾಡುವುದಿಲ್ಲ. ಬದಲಾಗಿ ಅವರ ಬಳಿ ಒಂದು ಬ್ಲೂಬುಕ್ ಇರುತ್ತದೆ. ಅದರ ಪ್ರಕಾರ, ತಮ್ಮ ಶಿಷ್ಟಾಚಾರ ಪಾಲನೆ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ, ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

Join Our Whatsapp Group

ಕೇಂದ್ರ ಸಚಿವ ವಿ.ಸೋಮಣ್ಣ ಶುಕ್ರವಾರ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಡಿಸಿ, ಸಿಇಒ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂಬ ಆರೋಪದ ಬಗ್ಗೆ ಇಂದು ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳಿಗೆ ತಮ್ಮ ಶಿಷ್ಟಾಚಾರ ಪಾಲನೆ ಮಾಡುವುದು ಮೊದಲೇ ತಿಳಿದಿರುತ್ತದೆ. ಶಿಷ್ಟಾಚಾರಕ್ಕೆ ಬ್ಲೂಬುಕ್ ಇದ್ದು, ಇದರ ಪ್ರಕಾರ ಅವರು ಕೆಲಸ ಮಾಡುತ್ತಾರೆ. ನನ್ನನ್ನು, ನಿಮ್ಮನ್ನು ಮೆಚ್ಚಸಲು ಅವರು ಕೆಲಸ ಮಾಡಲ್ಲ ಎಂದರು.

ಹಿರಿಯ ಅಧಿಕಾರಿಗಳಿಗೆ ಬೇರೆ ಅಧಿಕಾರಿಗಳನ್ನು ಕಳುಹಿಸಲು ಅವಕಾಶ ಇದೆ. ಡಿಸಿ ಅವರು ಎಸಿ ಅವರನ್ನು ಕಳಿಸಬಹುದು. ಎಸಿ ಅವರು ಇರದೆ ಇದ್ದರೆ, ತಹಸೀಲ್ದಾರ್​ ಅವರನ್ನು ಕಳಿಸಬಹುದು. ಕೆಲವೊಮ್ಮೆ ನಾನು ಬಂದಾಗಲೂ ಡಿಸಿ, ಸಿಇಒ ಬರುವುದಿಲ್ಲ. ಅದಕ್ಕೆ ನಾನು ತಪ್ಪು ತಿಳಿದುಕೊಳ್ಳಲು ಆಗುವುದಿಲ್ಲ. ಕೆಲಸದ ಒತ್ತಡದಲ್ಲಿ ಹಾಗೆ ಆಗುತ್ತದೆ. ಸೋಮಣ್ಣನವರ ವಿಷಯದಲ್ಲಿ ಅಂತಹದ್ದು ಏನಾದಾರೂ ಆಗಿದ್ದರೆ ಸರಿ ಮಾಡಿಕೊಳ್ಳೋಣ ಎಂದು ಸ್ಪಷ್ಟನೆ ನೀಡಿದರು.

ಹಾಸ್ಟೆಲ್‌ಗೆ ಭೇಟಿ, ಪರಿಶೀಲನೆ: ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ಬೆಂಕಿ ಕಾಣಿಸಿಕೊಂಡು ಘಟನೆಗೆ ಸಂಬಂಧಪಟ್ಟಂತೆ ಪರಮೇಶ್ವರ್, ಇಲ್ಲಿನ ಬಿ.ಹೆಚ್.ರಸ್ತೆಯಲ್ಲಿರುವ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಿದರು. ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು‌.

ಈ ಬಗ್ಗೆ ಮಾತನಾಡಿದ ಅವರು, ಹಾಸ್ಟೆಲ್ ​ನಲ್ಲಿ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿತ್ತು. ಹೀಗಾಗಿ ಪರಿಶೀಲನೆ ನಡೆಸಿದ್ದೇನೆ. ಸದ್ಯ ವಿದ್ಯಾರ್ಥಿನಿಯರು ಸಂತೋಷವಾಗಿದ್ದಾರೆ. ಸ್ನಾನಕ್ಕೆ ಬಿಸಿ ನೀರು ಸೇರಿ ಇತರ ಸಲವತ್ತುಗಳನ್ನು ಬೇಡಿಕೆ ಇಟ್ಟಿದ್ದಾರೆ. ಇದೇ ವೇಳೆ, 2,500 ವಿದ್ಯಾರ್ಥಿನಿಯರಿಗೆ ಹಾಸ್ಟೆಲ್​ನಲ್ಲಿ ಅವಕಾಶ ಇದೆ. ಇನ್ನೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ ಎಂದು ತಿಳಿಸಿದರು.

ಹಿಂದಿನ ಲೇಖನನೀಟ್: ಮರುಪರೀಕ್ಷೆಗೆ ಹಾಗೂ ತನಿಖೆಗೆ  ಸಿಎಂ ಆಗ್ರಹ
ಮುಂದಿನ ಲೇಖನತಿರುಮಲ ತಿರುಪತಿ ದೇವಸ್ಥಾನದ ನೂತನ ಇಒ ಆಗಿ ಐಎಎಸ್​ ಅಧಿಕಾರಿ ಶ್ಯಾಮಲಾ ರಾವ್​ ನೇಮಕ