ಕಾರವಾರ : ಇಷ್ಟಾರ್ಥ ಸಿದ್ಧಿಗಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೇವಿಯ ಮೊರೆಹೋಗಿದ್ದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಂದ್ಲೆ ಶ್ರೀ ಜಗದೀಶ್ವರಿ ದೇವಿ ದೇವಸ್ಥಾನಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ, ಹರಕೆ ಸಲ್ಲಿಸಲಿದ್ದಾರೆ.
ಬೆಳಗ್ಗೆ ಬೆಳಗಾವಿಯಿಂದ ಹೆಲಿಕಾಪ್ಟರ್ ಮೂಲಕ ಗೋಕರ್ಣಕ್ಕೆ ಆಗಮಿಸಿ ನಂತರ ಅಂದ್ಲೆಯ ದೇವಾಲಯದಲ್ಲಿ ಅರ್ಚಕ ಗಣಪತಿ ಅವರ ನೇತೃತ್ವದಲ್ಲಿ ಏಕಾಂತದಲ್ಲಿ ಪೂಜಾಕಾರ್ಯ ಮತ್ತು ಪ್ರಸಾದ ರೂಪದ ಫಲ ಕೇಳಲಿದ್ದಾರೆ. ಪೂಜಾ ಕಾರ್ಯದ ಸಮಯದಲ್ಲಿ ಬೆಂಬಲಿಗರಿಗೆ ನಿರ್ಬಂಧ ವಿಧಿಸಲಾಗಿತ್ತು.
ಈ ದೇವಾಲಯ ಹರಕೆ ಸಿದ್ಧಿ ಹಾಗೂ ಪ್ರಶ್ನಾ ಫಲಕ್ಕೆ ಪ್ರಸಿದ್ಧಿ ಪಡೆದಿದ್ದು, 2019 ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ತಮ್ಮ ಮನೋಇಚ್ಛೆ ಪೂರೈಕೆಗಾಗಿ ಏಕಾಂತದಲ್ಲಿ ಮೂರು ತಾಸುಗಳ ಕಾಲ ಪೂಜಾಕಾರ್ಯ ನೆರವೇರಿಸಿದ್ದರು.
ಇದೀಗ ಸರ್ಕಾರದ ಮುಖ್ಯಮಂತ್ರಿ ಸ್ಥಾನದ ಗೊಂದಲದ ನಡುವೆ ಮತ್ತೆ ಈ ಕ್ಷೇತ್ರಕ್ಕೆ ಡಿಕೆ ಶಿವಕುಮಾರ್ ಭೇಟಿ ನೀಡಿ ವಿಶೇಷ ಪೂಜಾಕಾರ್ಯ ನೆರವೇರಿಸುತ್ತಿರುವುದು ಸಹಜ ಕುತೂಹಲಕ್ಕೆ ಎಡೆಮಾಡಿದೆ.















