ಬೆಂಗಳೂರು : ನಗರದಲ್ಲಿ ಗುಂಡಿಗಳಿಂದ ಜನ ರೋಸಿ ಹೋಗಿದ್ದಾರೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಮತ್ತೊಂದು ಗುಂಡಿ ಭಾಗ್ಯವನ್ನೂ ಕೊಟ್ಟಿದ್ದಾರೆಂದು ಸರ್ಕಾರವನ್ನ ಜನ ಹಿಗ್ಗಾಮುಗ್ಗಾ ಜಾಡಿಸ್ತಿದ್ದಾರೆ. ನಗರವನ್ನ ಗುಂಡಿಮುಕ್ತ ಮಾಡಲು ಕೊಟ್ಟಿದ್ದ ಡೆಡ್ ಲೈನ್ ನಿನ್ನೆಗೆ ಮುಗಿದಿದೆ.
ಗುಂಡಿಗಳನ್ನು ಇನ್ನೂ ಮುಚ್ಚದ ಕಾರಣ ನವೆಂಬರ್ 10ನೇ ತಾರೀಖಿನ ವರೆಗೆ ಡೆಡ್ಲೈನ್ ವಿಸ್ತರಣೆ ಮಾಡಿದ್ದಾರೆ. ಈಗ ಸಿಎಂ, ಡಿಸಿಎಂ ಆದೇಶಕ್ಕೆ ಕೇರ್ ಮಾಡದವ್ರು, ಜಿಬಿಎ ಆಯುಕ್ತರ ಆದೇಶಕ್ಕೆ ಸೊಪ್ಪು ಹಾಕ್ತಾರಾ ಅನ್ನೋದು ಮುಂದಿರುವ ಪ್ರಶ್ನೆ.
ನಗರದಲ್ಲಿ 16 ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ. ಮುಖ್ಯರಸ್ತೆ, ಉಪರಸ್ತೆ, ವಾರ್ಡ್ಗಳಲ್ಲೂ ಸಾವಿರಾರು ಗುಂಡಿಗಳು ಬಿದ್ದಿದ್ದು ಅವುಗಳಿಗೆ ಇನ್ನೂ ಟಾರು ಭಾಗ್ಯ ಸಿಕ್ಕಿಲ್ಲ. ಕಳೆದ ತಿಂಗಳು ಮಳೆ ಬಿದ್ದ ಕಾರಣ, ಗುಂಡಿ ಮುಚ್ಚಲು ಆಗಿಲ್ಲ ಅನ್ನೋ ಸಮಜಾಯಿಷಿಯನ್ನ ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಹೇಳ್ತಿದ್ದಾರೆ.
ಗುಂಡಿಗಳನ್ನು ತುರ್ತಾಗಿ ಮುಚ್ಚಲು ಸಿಎಂ, ಡಿಸಿಎಂ ಹಲವು ಡೆಡ್ಲೈನ್ಗಳನ್ನ ನೀಡಿದ್ರೂ ನಗರವನ್ನ ಗುಂಡಿ ಮುಕ್ತ ಮಾಡಲು ಆಗಿಲ್ಲ. ಕಳೆದ ಎರಡು ದಿನಗಳ ಹಿಂದೆ ಜಿಬಿಎ ಅಧಿಕಾರಿಗಳನ್ನ ಕರೆದು ಮುಖ್ಯ ಆಯುಕ್ತರು ಒಂದು ವಾರದಲ್ಲಿ ಎಲ್ಲಾ ಗುಂಡಿಗಳನ್ನ ಮುಚ್ಚಲು ತಾಕೀತು ಮಾಡಿದ್ದಾರೆ. ಆದ್ರೆ ಅಧಿಕಾರಿ, ಸಿಬ್ಬಂದಿ ಎಷ್ಟರಮಟ್ಟಿಗೆ ರೀಚ್ ಆಗ್ತಾರೆ ಅನ್ನೋದೆ ಕುತೂಹಲವಾಗಿದೆ.














