ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಗೌಡಗೆ ಮನೆ ಊಟಕ್ಕೆ ಅನುಮತಿ ನೀಡದೇ ಇರಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ ಮನೆ ಊಟ ನೀಡದೇ ಇರಲು ಜೈಲಾಧಿಕಾರಿಗಳು ಮುಂದಾಗಿದ್ದಾರೆ.
ಮನೆ ಊಟ ಬಂದರೆ ಪರಿಶೀಲನೆ ಮಾಡಿದ ಬಳಿಕ ಜೈಲಿನ ಒಳಗೆ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ತಂಡ ಬೇಕಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಇರುವ 3 ಸಾವಿರ ಆರೋಪಿಗಳು ಇದೇ ಆದೇಶದ ಮೇಲೆ ಅರ್ಜಿ ಹಾಕಿದ್ದರೆ ಕಷ್ಟ ಆಗುತ್ತದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲು ಕಾರಾಗೃಹ ಇಲಾಖೆ ನಿರ್ಧಾರ ಮಾಡಿದೆ.
ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಮನೆಯೂಟಬೇಕೆಂದು ಆರೋಪಿ ಪವಿತ್ರ ಗೌಡ ಮನವಿ ಮಾಡಿದ್ದರು. ಜೊತೆಗೆ ನಾಗರಾಜು, ಲಕ್ಷ್ಮಣ್ ಕೂಡ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿತ್ತು ಎನ್ನಲಾಗಿದೆ.















