ಮನೆ ರಾಜ್ಯ ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

0

ಬೆಂಗಳೂರು (Bengaluru): ರಾಜ್ಯದ ಎಲ್ಲ ವರ್ಗದವರ ಅಭಿವೃದ್ಧಿಗೆ ಸಮಗ್ರವಾದ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಿ ಅದರ ಲಾಭವನ್ನು ಎಲ್ಲರಿಗೂ ತಲುಪಿಸುವ ಸದುದ್ದೇಶದಿಂದ ಸರ್ವರ ವಿಕಾಸವಾಗುವ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಜೆಟ್‌ ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಗೆ ಒಂದೇ ತಿಂಗಳ ಅವಧಿಯಲ್ಲಿ ಸರ್ಕಾರದ ಆದೇಶವನ್ನು ಹೊರಡಿಸಿ, ಪ್ರಥಮ ಬಾರಿಗೆ 4 ತಿಂಗಳ ಅವಧಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಡಳಿತದಲ್ಲಿ ದಕ್ಷತೆಯನ್ನು ತರಲಾಗಿದೆ. ಪ್ರಗತಿಪರವಾಗಿರುವ ಉದ್ಯಮವನ್ನು ಸ್ಥಾಪಿಸಿ, ಯುವಕರಿಗೆ ಉದ್ಯೋಗ ನೀಡುವುದರಿಂದ ಹಿಡಿದು ಹೊಲದಲ್ಲಿ ದುಡಿಯುವ ರೈತನವರೆಗೂ, ಕೂಲಿಕಾರರಿಗೆ, ಮಹಿಳೆಯರಿಗೆ, ಎಸ್ ಸಿ/ಎಸ್ ಟಿಗಳಿಗೆ, ಓಬಿಸಿಗಳ ಅಭಿವೃದ್ಧಿಗೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಈ ವರ್ಷ ವಿನೂತನ ಯೋಜನೆಗಳನ್ನು ಘೋಷಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 14,000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ. ಅನುದಾನ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಆ್ಯಸಿಡ್ ದಾಳಿಗೊಳಗಾದವರಿಗೆ ನೀಡುವ ಭತ್ಯೆಯನ್ನು 10,000 ರೂ. ಗಳಿಗೆ ಹೆಚ್ಚಳ,  ಆಶಾ ಕಾರ್ಯಕರ್ತರಿಗೆ, ಸಫಾಯಿ ಕರ್ಮಚಾರಿ, ಗ್ರಾಮ ಸಹಾಯಕರಿಗೆ ಮಾಸಿಕ ಭತ್ಯೆ ಹೆಚ್ಚಳ ಮಾಡಲು ಆದೇಶ ಈಗಾಗಲೇ ನೀಡಲಾಗಿದೆ. ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ, ಈ ಎಲ್ಲ ಸಾಧನೆಗಳು ಜನರನ್ನು ತಲುಪುತ್ತಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಅಭಿವೃದ್ಧಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ 5 ಹೊಸ ಇಂಟೆಗ್ರೇಟೆಡ್ ಟೌನ್ ಷಿಪ್ ಗಳನ್ನು ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಿದೆ. 6 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಬಡವರಿಗೆ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಡಯಾಲಿಸಿಸ್ ಸೈಕಲ್‌ ನಲ್ಲಿ 60,000ಕ್ಕೆ ಏರಿಸಲು ಆದೇಶಿಸಲಾಗಿದೆ. ಕ್ಯಾನ್ಸರ್ರೋಗಿಗಳಿಗೆ ಕೀಮೋಥೆರಪಿ ಚಿಕಿತ್ಸೆಯನ್ನು 10 ಕಾಲೇಜುಗಳಲ್ಲಿ ಒದಗಿಸಲು ಈಗಾಗಲೇ ಅನುಮತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದಲ್ಲಿ ಶಾಂತಿ ಹಾಗೂ ಕೋಮುಸೌಹಾರ್ದತೆಯನ್ನು ಕದಡುವ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಸರ್ಕಾರ ಸಮರವನ್ನು ಸಾರಿದೆ. ಇಂತಹ ಸಂದರ್ಭದಲ್ಲಿ ಜನರು ಸಂಯಮದಿಂದ ವರ್ತಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ದಕ್ಷಿಣ ಕನ್ನಡದಲ್ಲಿ ನಡೆದ ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ 5 ತನಿಖಾ ತಂಡಗಳನ್ನು ರಚಿಸಿ ಕೇರಳ ರಾಜ್ಯಕ್ಕೂ ಕಳುಹಿಸಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧನಕ್ಕೆ ಒಳಪಡಿಸುವ ವಿಶ್ವಾಸ ನಮಗಿದೆ ಎಂದು ನುಡಿದರು.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲೆಂದೇ ಕೆಲವೊಂದು ಸಂಘಟನೆಗಳು ರಾಜ್ಯದಲ್ಲಿ ಹುಟ್ಟಿಕೊಂಡಿವೆ. 5 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಹಿಜಾಬ್ ವಿವಾದವನ್ನು ವ್ಯವಸ್ಥಿತವಾಗಿ ರಾಜ್ಯದೆಲ್ಲೆಡೆ ಹಬ್ಬಿಸಲು ಪ್ರಯತ್ನಿಸಲಾಯಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸಿ, ಕಾನೂನಿನ ಆದೇಶವನ್ನು ಜಾರಿಗೊಳಿಸಿದ್ದರ ಪರಿಣಾಮ, ಇಂದು ಬಹುತೇಕ ಎಲ್ಲರೂ ಹಿಜಾಬ್ ಸಂಬಂಧಿಸಿದ ನಿಯಮವನ್ನು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.

ಹಿಂದಿನ ಲೇಖನತೆಲುಗಿನಲ್ಲಿ ಬ್ಯುಸಿಯಾದ ನಟಿ ಶ್ರೀಲೀಲಾ
ಮುಂದಿನ ಲೇಖನಯುಎಇನಲ್ಲಿ ಏಷ್ಯಾ ಕಪ್: ಆಗಸ್ಟ್‌ 27ರಿಂದ ಟೂರ್ನಿ ಆರಂಭ