ಮನೆ ಮನರಂಜನೆ ಕಿರುತೆರೆ ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್ ನಿಧನ

ಕಿರುತೆರೆ ನಿರ್ದೇಶಕ, ವನ್ಯಜೀವಿ ಛಾಯಾಗ್ರಾಹಕ ಕೆ.ಎನ್.ಮೋಹನ್ ನಿಧನ

0

ಕನ್ನಡ ಕಿರುತೆರೆ ಹಾಗು ಸಿನಿಮಾ ನಿರ್ದೇಶಕ ಕೆ.ಎನ್‌.ಮೋಹನ್‌ ಕುಮಾರ್‌ ಸೋಮವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

56 ವರ್ಷದ ಮೋಹನ್, ಪ್ರಖ್ಯಾತ ನಟಿ ಹಾಗು ನಿರೂಪಕಿ ವತ್ಸಲಾ ಮೋಹನ್ ಅವರ ಪತಿ.

ಎನ್‌.ಆರ್‌.ಕಾಲೋನಿಯ ರಾಮಲೀಲಾ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಮೋಹನ್ ನಿನ್ನೆ ಬಾತ್ ರೂಮ್​ಗೆಂದು ಹೋದವರು ಹಠಾತ್ತಾಗಿ ಕುಸಿದು ಬಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ತಾಯಿ ಮಾತ್ರ ಇದ್ದರು ಎಂದು ತಿಳಿದುಬಂದಿದೆ. ಮೋಹನ್ ದಶಕಗಳಿಂದ ದೂರದರ್ಶನ, ಸಿನಿಮಾ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಿನಿಮಾ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು.

ಪತ್ನಿ ವತ್ಸಲಾ ರಚಿಸಿದ ಸಜ್ಜಾದನಾ ಗಣೇಶ ಕೃತಿಯಾಧರಿಸಿ ಬೊಂಬೆಯಾಟ ಎನ್ನುವ ಸಿನಿಮಾ ಮಾಡಿದ್ದರು. 90 ನಿಮಿಷಗಳ ಈ ಸಿನಿಮಾ 2016ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗಳಿಸಿದೆ. ಮೋಹನ್‌ ಇಂಜಿನಿಯರಿಂಗ್ ಪದವೀಧರ.

ನಿರ್ದೇಶಕನಾಗಿಯೂ ತಮ್ಮ ಪ್ರತಿಭೆ ತೋರಿಸಿದ್ದ ಮೋಹನ್​, ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾಗಲೇ ವತ್ಸಲಾರ ಪರಿಚಯವಾಗಿ ಮದುವೆ ಮಾಡಿಕೊಂಡರು. ಆ ನಂತರದ ದಿನಗಳಲ್ಲಿ ಕಿರುತೆರೆ ನಿರ್ದೇಶಕ ಹಾಗು ವನ್ಯಜೀವಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ವತ್ಸಲ ಹಾಗು ಮಗಳು ಅನನ್ಯ ಅವರನ್ನು ಮೃತರು ಅಗಲಿದ್ದಾರೆ. ನಿರ್ದೇಶಕ ಟಿ.ಎನ್.ಸೀತಾರಾಮ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.