ಮೈಸೂರು: ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಬುಧವಾರ ನಡೆದ ಸರ್ಕಾರಿ ನೌಕರರ ಮುಷ್ಕರದಿಂದ ಜಿಲ್ಲೆಯ ಸರ್ಕಾರಿ ಸೇವೆಗಳಲ್ಲಿ ಅಡಚಣೆ ಉಂಟಾಯಿತು.
ನಗರದ ಕೆ.ಆರ್.ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿ, ಪಾಲಿಕೆಯ ಮುಖ್ಯ ಹಾಗೂ ವಲಯ ಕಚೇರಿಗಳಲ್ಲಿ ಸೇವೆ ಸಿಗದೆ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಜಯನಗರದಲ್ಲಿರುವ ಪಾಲಿಕೆ ವಲಯ ಕಚೇರಿಗೆ ಸಿಬ್ಬಂದಿ ಬಂದಿರಲಿಲ್ಲ. ಕಚೇರಿಯ ಬಾಗಿಲು ಮುಚ್ಚಲಾಗಿತ್ತು. ಖಾತೆ ಬದಲಾವಣೆ, ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಅರ್ಜಿ ಸಲ್ಲಿಸಲು ಬಂದಿದ್ದವರು ವಾಪಸ್ ಆದರು. ಕರ್ನಾಟಕ ಒನ್ ಕೇಂದ್ರಗಳು ಮಾತ್ರ ಕಾರ್ಯಾಚರಿಸಿದವು. ಹೊರಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದರು
ಹೊರರೋಗಿಗಳಿಂದ ಗಿಜಿಗುಡುತ್ತಿದ್ದ ಜಯನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ವ್ಯತ್ಯಯವಾಗಿತ್ತು. ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ಮಂಗಳವಾರದಿಂದಲೇ ದಾಖಲಿಸಿಕೊಂಡಿರಲಿಲ್ಲ. ವೈದ್ಯರು ಇರಲಿಲ್ಲ. ಶುಶ್ರೂಷಕಿಯೊಬ್ಬರಷ್ಟೇ ಇದ್ದರು. ನಾಲ್ವರು ‘ಡಿ’ ಗ್ರೂಪ್ ನೌಕರರು ಕೆಲಸಕ್ಕೆ ಹಾಜರಾಗಿದ್ದರು.
ಜಯನಗರದ ಕೌಟುಂಬಿಕ ನ್ಯಾಯಾಲಯ ಸಂಕೀರ್ಣದಲ್ಲಿ 200ಕ್ಕೂ ಹೆಚ್ಚು ನೌಕರರು ವಾಪಸಾದರು. ಕೆಲವರು ಕೆಲಸ ನಿರ್ವಹಿಸಿದರು.