ನವದೆಹಲಿ/ಮೈಸೂರು : ಸಿಎಂ ಸಿದ್ದರಾಮಯ್ಯ ಅವರಿಗೆ ಇಫ್ತಾರ್ ಕೂಟಕ್ಕೆ ಆಹ್ವಾನ ಬಂದರೆ ತಲೆಗೆ ಮುಸ್ಲಿಂ ಟೋಪಿ ಧರಿಸಿ, ಭುಜಕ್ಕೆ ಕಲರ್ ಕಲರ್ ಚೆಕ್ಸ್ ಶಾಲು ಹೊದಿಸಿಕೊಂಡು ಹೋಗುತ್ತಾರಲ್ಲವೇ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.
‘ನಾಡ ಹಬ್ಬಾ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹಣೆಯಲ್ಲಿ ಕುಂಕುಮ ಹಚ್ಚಿ ಬರಬೇಕಿಲ್ಲ’ ಎಂದಿರುವ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜೋಶಿ, ಅತೀವ್ರ ತುಷ್ಟೀಕರಣದಲ್ಲಿ ತೊಡಗಿರುವ, ನಾನೂ ಹಿಂದೂ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಧಾರ್ಮಿಕತೆಯ ಬಗ್ಗೆ ಏನು ಗೊತ್ತಿದೆ ಎಂದು ಚಾಟಿ ಬೀಸಿದ್ದಾರೆ.
‘ನಾಡಹಬ್ಬ ದಸರಾ ಉದ್ಘಾಟನೆ ಮಾಡುವ ವ್ಯಕ್ತಿಗೆ ಹಣೆಯಲ್ಲಿ ಕುಂಕುಮ ಇಡಬೇಕೆಂಬ ಫತ್ವಾ ಹೊರಡಿಸಲು ನಿಮ್ಮಿಂದ ಸಾಧ್ಯವಿಲ್ಲ ಬಿಡಿ ಎಂದು ಸಿಎಂಗೆ ಮಾತಿನಲ್ಲೇ ತಿವಿದಿರುವ ಸಚಿವರು, ಹಣೆಗೆ ಕುಂಕುಮ ಧರಿಸಬಾರದೆಂಬ ಫತ್ವಾ ಬಾನು ಮುಷ್ತಾಕ್ ಅವರ ಧರ್ಮದಲ್ಲಿಯೇ ಹೊರಡಿಸಲಾಗಿದೆಯಲ್ಲಾ. ಹಾಗಿರುವಾಗ ‘ಹಣೆಯಲ್ಲಿ ಕುಂಕುಮ ಹಚ್ಚಿ ಬರಬೇಕಿಲ್ಲ’ ಎಂಬ ನಿಮ್ಮ ಹೇಳಿಕೆಯೇ ಹಾಸ್ಯಾಸ್ಪದ ಎಂದು ಟೀಕಿಸಿದ್ದಾರೆ.
ಹಿಂದೂ ದೇವತೆಗಳ ಬಗ್ಗೆ ಗೌರವ, ಆಚಾರ-ವಿಚಾರ ಇಲ್ಲದವರಿಗಿಂತ ನಿಮ್ಮ ವಿಭಿನ್ನ ವಿಚಾರಗಳನ್ನು ಪಾಲಿಸಿದರೆ ಸಾಕು. ಹೆಚ್ಚಾಗಿ ಇಫ್ತಾರ್ ಕೂಟಕ್ಕೆ ಆಹ್ವಾನ ಬರುತ್ತದೆ. ಆಗ ತಲೆಗೆ ಮುಸ್ಲಿಂ ಟೋಪಿ ಧರಿಸಿ, ಭುಜಕ್ಕೆ ಕಲರ್ ಕಲರ್ ಚೆಕ್ಸ್ ಶಾಲೂ ಹೊದಿಸಿಯೇ ಹೋಗಬೇಕು ಅಲ್ಲವೇ? ಹಾಗಿರುವಾಗ ಒಂದು ಹಿಂದೂ ಹಬ್ಬದ ಉದ್ಘಾಟನೆಗೆ ‘ಕುಂಕುಮ ಧರಿಸಿ ಬರಬೇಕಿಲ್ಲ’ ಎಂಬ ಸಿಎಂ ಹೇಳಿಕೆ ಎಷ್ಟರ ಮಟ್ಟಿಗೆ ಸರಿ ಎಂದರು.















