ಮನೆ ದಾಂಪತ್ಯ ಸುಧಾರಣೆ ದಾಂಪತ್ಯ ಬಂಧನದಲ್ಲಿ ಇತರರಿಂದ ಬಿರುಕು ಮೂಡದಿರಲಿ

ದಾಂಪತ್ಯ ಬಂಧನದಲ್ಲಿ ಇತರರಿಂದ ಬಿರುಕು ಮೂಡದಿರಲಿ

0

ಪ್ರೇಮಿಸಿ ಆಗಲಿ ಹಿರಿಯರು ನೋಡಿದ ಸಂಬಂಧವೇ ಆದರೂ ಒಬ್ಬರ ಅಭಿರುಚಿಗಳಿಗೂ ಇನ್ನೊಬ್ಬರ ಅಭಿರುಚಿಗೂ ವಿಭಿನ್ನವಾಗಿರುವುದು ಇಲ್ಲಿ ಸಹಜವಾಗಿರುತ್ತದೆ. ದಾಂಪತ್ಯ ಒಂದು ಪವಿತ್ರವಾದ ದೇವರು ಬೆಸೆದ ಸಂಬಂಧವಾಗಿರುತ್ತದೆ. ಮೂರು ಗಂಟಿನಲ್ಲಿ ಈ ಬಾಳ ನಂಟಿನ ಪವಿತ್ರ ಬಂಧನದಲ್ಲಿ ಬಂಧಿಯಾಗಿರುತ್ತಾರೆ.

Join Our Whatsapp Group

ಒಬ್ಬರ ಮೇಲೆ ಮತ್ತೊಬ್ಬರಿಗಿರುವ ಪ್ರೀತಿ, ನಂಬಿಕೆ, ಆಳವಾದ ಗೌರವ, ವಿಶ್ವಾಸಗಳೇ ಅವರ ಬಂಧನವನ್ನು ನೂರು ಕಾಲ ಬಾಳುವಲ್ಲಿ ಕೊಂಡೊಯ್ಯುತ್ತದೆ. ಕೆಲವೊಮ್ಮೆ ಇವುಗಳಲ್ಲಿ ಯಾವುದಾದರು ಒಂದರ ಕೊರತೆಯಾದರು ಸಂಬಂಧದಲ್ಲಿ ಬಿರುಕು ಕಾಣುತ್ತದೆ. ಇಲ್ಲಿ ದಾಂಪತ್ಯದಲ್ಲಿ ದಂಪತಿಗಳು ಮುಖ್ಯವಾಗಿ ನೆನಪಿನಲ್ಲಿಡಬೇಕಾದದ್ದು ಮೂರನೇ ವ್ಯಕ್ತಿಯ ಪ್ರವೇಶವನ್ನು ನಿಷ್ಕ್ರಿಯಗೊಳಿಸಬೇಕು ಎಂಬ ಎಚ್ಚರದ ಮಾತನ್ನು.

ನಿಮ್ಮ ಸಂಸಾರದಲ್ಲಿ ತೊಂದರೆ ಕಂಡುಬಂದರೆ ನೀವೇ ಕುಳಿತು ಪರಸ್ಪರ ಮಾತನಾಡಿ, ಬಗೆ ಹರಿಸಬೇಕೇ ಹೊರತು  ಇತರರ ಪ್ರವೇಶವಿರಬಾರದು. ಹಾಗೇ ಸಮಸ್ಯೆ ಬಂದಾಗ ಇತರರನ್ನು ಹೋಲಿಕೆ ಮಾಡಿ ಮಾತನಾಡಬಾರದು. ನೀವಾಡುವ ಚುಚ್ಚು ಮಾತುಗಳು ಕೆಲವೊಮ್ಮೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ. ಅವರು ನಿಮ್ಮಂದ ದೂರಗಲು, ಇಲ್ಲ ಶಾಶ್ವತವಾಗಿ ಇಹಲೋಕ ತ್ಯಜಿಸಲು ಬಯಸುತ್ತಾರೆ. ಯಾಕೆಂದರೆ ಯಾವುದೇ ಹೆಂಡತಿ ತನ್ನ ಗಂಡ ಏನೇ ಬೈದರು ತಾಳುತ್ತಾಳೆ ಮತ್ತು ಸಹಿಸುತ್ತಾಳೆ. ಆದರೆ ಗಂಡ ಪರಸ್ತ್ರೀ ಮುಂದೆ ಹೆಂಡತಿಯನ್ನು ಅವಮಾನಿಸಿದರೆ ಮಾತ್ರ ಸಹಿಸಳು. ಸ್ವಾಭಿಮಾನಿಯಾದ ಹೆಣ್ಣು ಮಾತು ಕೇಳಲು, ಅವಮಾನಿತಳಾಗಲು ಬಯಸುವುದಿಲ್ಲ.

ಇತರರನ್ನು ಮೆಚ್ಚಿಸಲು ಹೋಗಿ ನಿಮ್ಮ ದಾಂಪತ್ಯದಲ್ಲಿ ಬಿರುಕು ತಂದುಕೊಳ್ಳದಿರಿ.

ತನ್ನ ಪತಿ ಹೆಂಡತಿಯನ್ನು ವಹಿಸಿಕೊಂಡು ಮಾತಾಡಿದರೆ, ಅಥವಾ ಬಾಳಿನಲ್ಲಿ ಹುಳಿ ಹಿಂಡಲು ಮೂರನೇ ವ್ಯಕ್ತಿ ಪ್ರಯತ್ನ ಪಟ್ಟಾಗ ಅವರಿಗಿಂತ ತನ್ನ ಹೆಂಡತಿಯ ಮೇಲೆ ಗೌರವ, ನಂಬಿಕೆ, ಪ್ರೀತಿ ಹೊಂದಿದ ಪತಿ ಅವಳ ಪರ ನಿಂತಾಗ ಜಗತ್ತನ್ನೇ ಗೆದ್ದ ಸಂಭ್ರಮ ಅವರದಾಗಿರುತ್ತದೆ. ಆದರೆ ಇತರರನ್ನು ಮೆಚ್ಚಿಸಲು ಹೋಗಿ ನಿಮ್ಮ ದಾಂಪತ್ಯದಲ್ಲಿ ಬಿರುಕು ತಂದುಕೊಳ್ಳದಿರಿ.

ಯಾಕೆಂದರೆ ಮೂರನೇ ವ್ಯಕ್ತಿ ಎಂದಿಗೂ ಶಾಶ್ವತವಲ್ಲ. ದುಡುಕಿ ನಿರ್ಧಾರಕ್ಕೆ ಬರುವ ಮೊದಲು ನಿಮ್ಮ ಹಿಂದಿನ ದಿನದ ನಿಮ್ಮ ಅವರ ಪ್ರೀತಿ, ತ್ಯಾಗ, ಇಷ್ಟು ದಿನದ ಹೋರಾಟದ ಬದುಕಿನಲ್ಲಿ ನಿಮ್ಮೊಂದಿಗಿದ್ದ ಆ ಘಳಿಗೆ ನೆನೆಯಿರಿ. ಆಗ ಇಂತಹ ಮೋಡಿ ಮಾಡುವ ವಿಷವರ್ತುಲಗಳಿಂದ ಮುಕ್ತಿ ಸಿಗುತ್ತದೆ. ಅಲ್ಲದೆ ಜೀವನದಲ್ಲಿ ಉಸಿರಿನ ಕೊನೆಯವರೆಗೂ ನಿಮ್ಮ ಜೀವನದಲ್ಲಿ ನಿಮ್ಮ ದಾಂಪತ್ಯಕ್ಕೆ ಇಂತಹ ನಿಧಾನಗತಿಯ ವಿಷ ಪ್ರಹಾರ ಮೂರನೇ ವ್ಯಕ್ತಿಯಿಂದ ಆಗುವುದನ್ನು ತಡೆಗಟ್ಟಬಹುದು.

ನಿಮ್ಮ ಸಂಬಂಧ ಚೆನ್ನಾಗಿ ಇರಬೇಕಾದರೆ ನಿಮ್ಮ ಬಾಳಿನ ಸಂಗಾತಿಯೊಂದಿಗೆ ನಿಮ್ಮ ನಡೆ-ನುಡಿಗಳು ಮರೆಮಾಚುವಂತಿರಬಾರದು. ಪ್ರೀತಿಯ ಹಿತವಾದ ಸಲುಗೆ ನಿಮ್ಮನ್ನು ಇನ್ನಷ್ಟು ಹತ್ತಿರ ಮಾಡುತ್ತದೆ ನಿಮ್ಮ ಪ್ರೀತಿ ಅವರಿಗೆ ವ್ಯಕ್ತ ಪಡಿಸುತ್ತಾ ನಿಮ್ಮ ಬಂಧನವನ್ನು ಗಟ್ಟಿಗೊಳಿಸಿ. ಆಗ ನಿಮ್ಮ ದಾಂಪತ್ಯದಲ್ಲಿ ವಿರಸವು ಹೋಗಿ ಸರಸ ಸಲ್ಲಾಪದಲಿ ಜೀವನವನ್ನು ಹಾಗೂ ನಿಮ್ಮ ಸಂಗಾತಿಯನ್ನು ಇನ್ನಷ್ಟು ಅರಿತು ಅವರಿಗೆ ಆಸರೆಯಾಗಿ ಬಾಳಲು ಸಹಾಯವಾಗುತ್ತದೆ. ಆಗ ನೀವು ಅವರಲ್ಲಿರುವ ಒಳ್ಳೆಯದನ್ನು ಗುರುತಿಸುವಲ್ಲಿ ಯಶಸ್ವಿಯಾಗುತ್ತೀರಿ. ಇಲ್ಲವಾದರೆ ಅವರು ಏನೇ ಮಾಡಿದರು ನೀವು ಅದರಲ್ಲಿ ತಪ್ಪು ಕಂಡುಹಿಡಿಯುತ್ತಾ ಅವರನ್ನು ನೋಯಿಸಿ ಮಾತನಾಡುತ್ತಾ, ಇತರರ ಎದುರು ನಿಮ್ಮ ಸಂಗಾತಿಯನ್ನು ಅವಮಾನಿಸುವುದು, ಅವರ ಯೋಗ್ಯತೆಯನ್ನು ಮೂರನೇ ವ್ಯಕ್ತಿಯ ಜೊತೆ ಇವರನ್ನು ಹೋಲಿಸಿ ಅಳಿಯುತ್ತೀರಿ. ಒಮ್ಮೆ ಆಲೋಚಿಸಿ ಅವರು ಕೂಡ ನಿಮ್ಮನ್ನು ಇತರರೊಂದಿಗೆ ಹೋಲಿಸಿ ಅಥವ ಯೋಗ್ಯತೆ ಬಗ್ಗೆ ಮಾತನಾಡಿದರೆ ಎಷ್ಟು ನಿಮಗೆ ನೋವಾಗುತ್ತದೆ ಅಲ್ಲವೆ? ನೀವು ಅವರಿಗೆ ನೋವು ಕೊಡುವ ಮುನ್ನ ಅದು ನಿಮ್ಮ ಮೇಲೆ ಆದರೆ ಅದರ ಪರಿಣಾಮ, ನಿರ್ಧಾರ, ನೋವು ಹೇಗಿರುತ್ತದೆ ಎಂದು ಆಲೋಚಿಸಿ. ಹೀಗೆ ಮಾಡುವುದರಿಂದ ನಾವು ನಮ್ಮ ಸಂಗಾತಿಯನ್ನು ನೋಯಿಸುವ ಮನಸು ಮಾಡುವುದಿಲ್ಲ. ನಿಮ್ಮನ್ನು ನೀವು ಪ್ರೀತಿಸುವಂತೆ ಆಕೆಯನ್ನು ಒಮ್ಮೆ ಪ್ರೀತಿಸಿ ನೋಡಿ ನಿಮಗಾಗಿ ಮಿಡಿವ ಜೀವ ನಿಮ್ಮ ಸೇವೆಯಲ್ಲೇ ತನ್ನ ಬದುಕ ಸಂತಸ ಕಾಣುವ ಮನಕೆ ಚೂರು ಪ್ರೀತಿ ನೀಡಿದರೆ ದಾಂಪತ್ಯ ಸಂತಸದ ಗೂಡಾಗುತ್ತದೆ. 

ಒಂದು ವೇಳೆ ನಿಮ್ಮ ವರ್ತನೆ ಮೇಲೆ ತಿಳಿಸಿದಂತೆ ಇದ್ದು ನಿಮ್ಮ ಸಂಗಾತಿ ಎಲ್ಲವನ್ನು ಸಹಿಸಿ, ತನ್ನ ಸ್ವಾಭಿಮಾನವನ್ನು ಬಿಟ್ಟು ನಿಮ್ಮೊಂದಿಗಿದ್ದಾರೆ ಎಂದರೆ ಅವರಿಗೆ ನಿಮಗಿಂತ ಈ ಲೋಕದಲ್ಲಿ ಮುಖ್ಯ ಮತ್ತೊಬ್ಬರಿಲ್ಲ ಎಂಬುದನ್ನು ಅರಿಯಿರಿ. ಅವರ ಪ್ರೀತಿ ಉಸಿರು ಗಟ್ಟಿಸುತ್ತದೆ ಎಂದು ಫೀಲ್ ಮಾಡುವ ಬದಲು ನೀವು ನೀಡುವ ಎಲ್ಲಾ ಅವಮಾನ ನೋವುನ್ನು ಯಾವುದೇ ಆದಾಯ ಬಯಸದೆ ಬದುಕುತ್ತಿರುವ ಮನ ಇತರರೆದುರು ನಿಮ್ಮ ಸಂಗಾತಿಯೆಂದು ಹೆಮ್ಮೆಯಿಂದ ತೋರ್ಪಡಿಸಿಕೊಳ್ಳಿ. ದೇವರು ಕೂಡಿಸಿದ ದಾಂಪತ್ಯ ಬಂಧವನ್ನು ಮನುಷ್ಯನು ಅಗಲಿಸಬಾರದು.

ಹಿಂದಿನ ಲೇಖನವಿಟ್ಲ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ
ಮುಂದಿನ ಲೇಖನಸಹಕಾರ ಸಂಸ್ಥೆಗಳು ಹಾಗೂ ಬ್ಯಾಂಕ್ ಗಳಲ್ಲಿ  ಹಣ ದುರುಪಯೋಗ ಕಂಡುಬಂದರೆ ಸಂಬಂದಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಕೆ. ಎನ್ ರಾಜಣ್ಣ