ಮನೆ Uncategorized 10 ವರ್ಷಗಳಲ್ಲಿ 193 ರಾಜಕಾರಣಿಗಳ ವಿರುದ್ಧಇಡಿ ಪ್ರಕರಣ ದಾಖಲು: ಇಬ್ಬರಿಗೆ ಮಾತ್ರ ಶಿಕ್ಷೆ

10 ವರ್ಷಗಳಲ್ಲಿ 193 ರಾಜಕಾರಣಿಗಳ ವಿರುದ್ಧಇಡಿ ಪ್ರಕರಣ ದಾಖಲು: ಇಬ್ಬರಿಗೆ ಮಾತ್ರ ಶಿಕ್ಷೆ

0

ಹೊಸದಿಲ್ಲಿ : ಕಳೆದ ೧೦ ವರ್ಷಗಳಲ್ಲಿ ದೇಶಾದ್ಯಂತ ೧೯೩ ರಾಜಕಾರಣಿಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿ, ತನಿಖೆ ನಡೆಸಿದೆ. ಈ ಪೈಕಿ, ಇಬ್ಬರು ಮಾತ್ರವೇ ಅಪರಾಧಿಗಳು ಎಂದು ಇಡಿ ಸಾಬೀತು ಪಡಿಸಿದೆ ಎಂದು ಹಣಕಾಸು ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ.

ಉಳಿದವರಲ್ಲಿ ಹಲವರ ವಿರುದ್ಧದ ತನಿಖೆಗಳು ಮೊಟಕುಗೊಂಡಿವೆ. ಕೆಲವರ ವಿರುದ್ಧ ತನಿಖೆಗಳೇ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.
ಸಿಪಿಎಂ ಸಂಸದ ಎ.ಎ. ರಹೀಂ ಅವರು ರಾಜಕಾರಣಿಗಳ ವಿರುದ್ಧ ಇಡಿ ದಾಖಲಿಸಿದ್ದ ಪ್ರಕರಣಗಳು ಮತ್ತು ಅವುಗಳ ತನಿಖಾ ಸ್ಥಿತಿ ಹಾಗೂ ಖುಲಾಸೆಗೊಂಡಿರುವ ಪ್ರಕರಣಗಳ ಬಗ್ಗೆ ಪಕ್ಷವಾರು ಮತ್ತು ರಾಜ್ಯವಾರು ಮಾಹಿತಿ ಒದಗಿಸುವಂತೆ ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ್ದರು. ಅವರ ಪ್ರಶ್ನೆಗೆ ಮಂಗಳವಾರ ಚೌಧರಿ ಲಿಖಿತ ಉತ್ತರ ನೀಡಿದ್ದಾರೆ. “ರಾಜ್ಯವಾರು ಸಂಸದರು, ಶಾಸಕರು ಹಾಗೂ ಸ್ಥಳೀಯ ರಾಜಕಾರಣಿಗಳ ವಿರುದ್ಧ ಇಡಿ ದಾಖಲಿಸಿರುವ ಪ್ರಕರಣಗಳ ಕುರಿತು ದತ್ತಾಂಶವನ್ನು ನಿರ್ವಹಿಸಲಾಗಿಲ್ಲ. ಆದರೆ, ದೇಶಾದ್ಯಂತ, ೨೦೨೫ರ ಏಪ್ರಿಲ್ ೧ರಿಂದ ೨೦೨೫ರ ಫೆಬ್ರವರಿ ೨೮ರವರೆಗೆ ೧೯೩ ರಾಜಕಾರಣಿಗಳ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ” ಎಂದು ತಿಳಿಸಿದ್ದಾರೆ.

ಆ ಪೈಕಿ, ೨೦೨೨-೨೩ರ ಆರ್ಥಿಕ ವರ್ಷದಲ್ಲಿ ಗರಿಷ್ಠ ಪ್ರಕರಣಗಳನ್ನು ಇಡಿ ದಾಖಲಿಸಿದೆ. ಆ ವರ್ಷ ೩೨ ಪ್ರಕರಣಗಳು ದಾಖಲಾಗಿವೆ. ೨೦೨೦-೨೧ ಮತ್ತು ೨೦೨೩-೨೪ರಲ್ಲಿ ತಲಾ ೨೭ ಹಾಗೂ ೨೦೧೯-೨೦ ಮತ್ತು ೨೦೨೧-೨೨ರಲ್ಲಿ ತಲಾ ೨೬ ಪ್ರಕರಣಗಳು ದಾಖಲಾಗಿವೆ ಎಂದು ಅವರ ಉತ್ತರದಲ್ಲಿ ಹೇಳಿದ್ದಾರೆ. ಒಟ್ಟು ೧೯೩ ಪ್ರಕರಣಗಳ ಪೈಕಿ ಎರಡು ಪ್ರಕರಣಗಳಲ್ಲಿ ಮಾತ್ರವೇ ಆರೋಪ ಸಾಬೀತು ಮಾಡುವಲ್ಲಿ ಇಡಿ ಸಲಭವಾಗಿದೆ. ಆ ಎರಡರಲ್ಲಿ, ೨೦೧೬-೧೭ರಲ್ಲಿ ಒಂದು ಪ್ರಕರಣ ಮತ್ತು ೨೦೧೯-೨೦ರಲ್ಲಿ ಒಂದು ಪ್ರಕರಣದಲ್ಲಿ ಮಾತ್ರವೇ ಇಡಿ ಆರೋಪ ಸಾಬೀತು ಮಾಡಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ವಿಶೇಷವಾಗಿ, ೨೦೨೪ರ ಲೋಕಸಭಾ ಚುನಾವಣೆಯ ಸಮಯಲ್ಲಿಯೇ ಹೆಚ್ಚು (೫೯) ಪ್ರಕರಣಗಳು ದಾಖಲಾಗಿವೆ ಎಂದು ಸಚಿವರ ಉತ್ತರದಿಂದ ಗೊತ್ತಾಗಿದೆ. ಜೊತೆಗೆ, ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಇಡಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿದೆ. ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಪ್ರಮುಖ ನಾಯಕರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ. ಮಾಜಿ ಶಿಕ್ಷಣ ಸಚಿವ ಪಾರ್ಥಾ ಚಟರ್ಜಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಜ್ಯೋತಿಪ್ರಿಯಾ ಮುಲ್ಲಿಕ್, ಅನಬ್ರಾಟಾ ಮೊಂಡಲ್ ಹಾಗೂ ಅವರು ಟಿಎಂಸಿ ಶಾಸರನ್ನು ಇಡಿ ಬಂಧಿಸಿತ್ತು. ಅವರಲ್ಲಿ, ಚಟರ್ಜಿಯನ್ನು ಹೊರತುಪಡಿಸಿ, ಉಳಿದವರೆಲ್ಲರು ಜಾಮೀನು ಪಡೆದು ಹೊರಬಂದಿದ್ದಾರೆ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಕಲ್ಲಿದ್ದಲು ಹಗರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಅವರನ್ನು ಇಡಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ. ಮಾತ್ರವಲ್ಲದೆ, ಚಟರ್ಜಿ ವಿರುದ್ಧ ವಿಚಾರಣೆ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಬಿಐ ಕೂಡ ಚಾರ್ಜ್‌ಶೀಟ್ ಸಲ್ಲಿಸಿದ್ದು, ಅದರಲ್ಲಿಯೂ ಅಭಿಷೇಕ್ ಹೆಸರನ್ನು ಉಲ್ಲೇಖಿಸಿದೆ.

ಇಡಿ ಮತ್ತು ಸಿಬಿಐ ರೀತಿಯ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಿಜೆಪಿಯ ವಾಷಿಂಗ್ ಮಷೀನ್‌ಗಳು ಎಂದು ವಿರೋಧಗಳು ಕರೆಯುತ್ತವೆ. ಅದಕ್ಕೆ ಹಲವು ಕಾರಣಗಳೂ ಇವೆ. ವರದಿಯ ಪ್ರಕಾರ, ದೇಶಾದ್ಯಂತ ೨೫ ವಿರೋಧ ಪಕ್ಷಗಳ ಹಲವು ನಾಯಕರು ಬಿಜೆಪಿಗೆ ಸೇರಿದ ಬಳಿಕ ಅವರ ವಿರುದ್ಧದ ತನಿಖೆಗಳನ್ನು ಇಡಿ ಮತ್ತು ಸಿಬಿಐ ಮೊಕಟುಗೊಳಿಸಿವೆ. ಅವರಲ್ಲಿ, ಬಂಗಾಳದ ಹಾಲಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಔವಾಣ್, ಅಸ್ಸಾಂ ಮುಖ್ಯಮಂತ್ರಿ ಹಿಮ್ತಾ ಬಿಸ್ವಾ ಶರ್ಮಾ ಹಾಗೂ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರು ಸೇರಿದ್ದಾರೆ.

ಮತ್ತೊಂದೆಡೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಇತರರನ್ನು ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಬಂಧಿಸಲಾಗಿತ್ತು. ಈಗ ಅವರೆಲ್ಲರೂ ಜಾಮೀನು ಪಡೆದು ಹೊರಬಂದಿದ್ದಾರೆ.