ಬೀದರ್ : ಜಿಲ್ಲೆಯ ವಿವಿಧ ಮಠಗಳಿಗೆ ಸರ್ಕಾರದ ದೇಣಿಗೆ ವಿತರಿಸಿದ ಈಶ್ವರ್ ಖಂಡ್ರೆ ಅವರು ಮಠಮಾನ್ಯಗಳು, ಧಾರ್ಮಿಕ, ಆಧ್ಯಾತ್ಮಿಕ ಪ್ರಸಾರ, ಪ್ರಚಾರದ ಜೊತೆಗೆ ಸಮಾಜದಲ್ಲಿ ಸ್ವಾಸ್ಥ್ಯ ಮೂಡಿಸಲು ಶ್ರಮಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೆಹಕರ್ ವಿಶ್ವಶಾಂತಿ ಟ್ರಸ್ಟ್, ತಡೋಳ, ಹಾರಕೋಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ, ದೇಗಲಮಾಡಿ ಬಸವಲಿಂಗ ಅವಧೂತ ಆಶ್ರಮ, ಹುಡುಗಿ ಹಿರೇಮಠ ಟ್ರಸ್ಟ್, ಬೆಲ್ದಾಳೆಯ ಶರಣ ತತ್ವ ಪ್ರಸಾರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಸೇರಿದಂತೆ ಸುಮಾರು 28 ಮಠಗಳಿಗೆ ರಾಜ್ಯ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರಾಗಿರುವ ಮೊದಲ ಕಂತಿನ ಚೆಕ್ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಪ್ರತಿಪಾದಿಸಿದ ರೇಣುಕಾದಿ ಆಚಾರ್ಯರು, ದಯವೇ ಧರ್ಮದ ಮೂಲವಯ್ಯ ಎಂದ ಬಸವಾದಿ ಶರಣು ಈ ನಾಡಿಗೆ ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟಿದ್ದಾರೆ. ಆ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವ ಜೊತೆಗೆ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ ಮಠಗಳಿಗೆ ಸರ್ಕಾರ ನೆರವು ನೀಡುತ್ತಿದ್ದು, ಅದರ ಸದುಪಯೋಗವಾಗಬೇಕು ಎಂದರು.
ಇಂದು ಯುವಜನರು ದುಶ್ಚಟ ದುರ್ಗುಣಗಳ ದಾಸರಾಗುತ್ತಿದ್ದಾರೆ, ಮಾದಕದ್ರವ್ಯದ ದುರ್ವ್ಯಸನಕ್ಕೆ ಈಡಾಗುತ್ತಿದ್ದಾರೆ. ಮಠಾಧಿಪತಿಗಳು ಯುವಜನರನ್ನು ಇಂತಹ ವ್ಯಸನಗಳಿಂದ ಮುಕ್ತಗೊಳಿಸಿ, ಸತ್ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸಬೇಕು ಎಂದು ತಿಳಿಸಿದರು. ಎಲ್ಲ ಧರ್ಮಗಳ ಸಾರವೂ ದಯೆ ಆಗಿದೆ. ಬಸವಾದಿ ಶರಣರೂ ಇದನ್ನೇ ಪ್ರತಿಪಾದಿಸಿದ್ದಾರೆ. ಸಮಾಜವನ್ನು ಧರ್ಮ, ಜಾತಿಯ ಹೆಸರಲ್ಲಿ ಒಡೆಯಲು ಬಿಡದೆ, ಸರ್ವರೂ ಸಹಬಾಳ್ವೆಯಿಂದ ಸೋದರರಂತೆ ಬಾಳಲು ಮಠಾಧಿಪತಿಗಳು ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.















