ಬೆಂಗಳೂರು : ಆಂಧ್ರಪ್ರದೇಶದ ಈ ಹಿಂದಿನ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಅಬಕಾರಿ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಎಂಬ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕನನ್ನು ಆಂಧ್ರ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ಬೆನ್ನುಬಿದ್ದಿದ್ದ ಆಂಧ್ರ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಮಾಜಿ ಸಚಿವ ಕಾಕಣಿ ಗೋವರ್ಧನ್ ರೆಡ್ಡಿ ಮತ್ತು ಮಾಜಿ ಶಾಸಕ ವಲ್ಲಭನೇನಿ ವಂಶಿ ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದಾರೆ. ಈಗ, ಪಕ್ಷದ ಮತ್ತೊಬ್ಬ ಪ್ರಮುಖ ನಾಯಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರನ್ನು ಪೊಲೀಸರು ಲಾಕ್ ಮಾಡಿದ್ದಾರೆ.
ಈ ಹಿಂದಿನ ವೈಸಿಪಿ ಆಡಳಿತಾವಧಿಯಲ್ಲಿ ಮದ್ಯ ನೀತಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಆಡಳಿತರೂಢ ಟಿಡಿಪಿ ಸರ್ಕಾರ ಆರೋಪಿಸುತ್ತಿದೆ. ಈ ವಿಷಯದಲ್ಲಿ ವೈಸಿಪಿ ನಾಯಕರು ಮಾತ್ರವಲ್ಲದೇ ಕೆಲ ಅಧಿಕಾರಿಗಳ ಪಾತ್ರವೂ ಇದೆ ಎಂದು ಟಿಡಿಪಿ ಸರ್ಕಾರ ಶಂಕಿಸಿದೆ. ಈ ಮದ್ಯ ಹಗರಣದ ತನಿಖೆಗಾಗಿ ಸಿಎಂ ಚಂದ್ರಬಾಬು ನಾಯ್ಡು ವಿಶೇಷ ಎಸ್ಐಟಿ ರಚಿಸಿದ್ದಾರೆ. ಸದ್ಯ ಬಂಧಿತ ಚೆವಿರೆಡ್ಡಿಯು ದೇಶ ಬಿಟ್ಟು ಹೋಗದಂತೆ ತಡೆಯಲು ಪೊಲೀಸರು ಲುಕ್ಔಟ್ ನೋಟಿಸ್ ಸಹ ಹೊರಡಿಸಿದ್ದರು.














