ಮನೆ ಸುದ್ದಿ ಜಾಲ ಜಮ್ಮು ಕಾಶ್ಮೀರದಲ್ಲಿ ವೈದ್ಯನ ಅರೆಸ್ಟ್ ಬೆನ್ನಲ್ಲೇ ದೆಹಲಿ ಸಮೀಪ ಸ್ಫೋಟಕಗಳು ಪತ್ತೆ..!

ಜಮ್ಮು ಕಾಶ್ಮೀರದಲ್ಲಿ ವೈದ್ಯನ ಅರೆಸ್ಟ್ ಬೆನ್ನಲ್ಲೇ ದೆಹಲಿ ಸಮೀಪ ಸ್ಫೋಟಕಗಳು ಪತ್ತೆ..!

0

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ವೈದ್ಯನನ್ನು ಬಂಧಿಸಿದ ಬೆನ್ನಲ್ಲೇ ದೆಹಲಿಯ ಸಮೀಪದಲ್ಲಿ 360 ಕೆ.ಜಿ ಸ್ಫೋಟಕಗಳು, ರೈಫಲ್ ಹಾಗೂ ಮದ್ದುಗುಂಡುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಶ್ರೀನಗರದಲ್ಲ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಹಿನ್ನೆಲೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾಶ್ಮೀರಿ ಮೂಲದ ವೈದ್ಯ ಆದಿಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರು 360 ಕೆ.ಜಿ ಅಮೋನಿಯಂ ನೈಟ್ರೇಟ್ ಸ್ಫೋಟಕ, ಎರಡು ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಫರಿದಾಬಾದ್‌ ಪೊಲೀಸ್‌ ಕಮಿಷನರ್‌ ಸತೇಂದರ್‌ ಕುಮಾರ್‌ ಗುಪ್ತಾ ಅವರ ಮಾಹಿತಿ ಪ್ರಕಾರ, ವಿಚಾರಣೆ ವೇಳೆ ಆರೋಪಿ ವೈದ್ಯ ಸ್ಫೋಟಕಗಳ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾನೆ. ಈ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲ ಮುಜಮ್ಮಿಲ್ ಶಕೀಲ್ ಎಂಬ ಇನ್ನೋರ್ವ ವೈದ್ಯ ಸಂಗ್ರಹಿಸಿದ್ದು, ಆರೋಪಿ ಮುಜಮ್ಮಿಲ್‌ನ್ನು ಬಂಧಿಸಲಾಗಿದೆ.

ಈಗಾಗಲೇ ಆರೋಪಿ ರಾಥರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಸದ್ಯ ಈ ಸ್ಫೋಟಕಗಳ ಸಂಗ್ರಹಣೆ, ಸಾಗಾಣೆ ಹಿಂದಿನ ಜಾಲ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ. ಇದು ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದ್ದಾರೆ.

ಅ.27ರಂದು ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೈದ್ಯ ಆದಿಲ್ ಅಹ್ಮದ್ ರಾಥರ್ ಪೋಸ್ಟರ್ ಅಂಟಿಸುವುದು ಕಂಡುಬಂದಿತ್ತು. ಅದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತು.

ಬಳಿಕ ತನಿಖೆ ವೇಳೆ ನೀಡಿದ್ದ ಮಾಹಿತಿ ಪ್ರಕಾರ, ಅನಂತ್‌ನಾಗ್ ಸರ್ಕಾರಿ ಕಾಲೇಜುವೊಂದರಲ್ಲಿ ರಾಥರ್ ಲಾಕರ್‌ನಿಂದ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು. 2019ರ ಪುಲ್ವಾಮಾ ದಾಳಿಯ ಸಂದರ್ಭದಲ್ಲಿ 80 ಕೆ.ಜಿಯಷ್ಟು ಆರ್‌ಡಿಎಕ್ಸ್ ಬಳಸಿ ಸಿಆರ್‌ಪಿಎಫ್ ಬಸ್ಸನ್ನು ಸ್ಫೋಟಿಸಲಾಗಿತ್ತು ಎನ್ನಲಾಗಿದೆ.