ತಿರುವನಂತಪುರಂ: ಪ್ರಧಾನಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ನೌಕಾಪಡೆಯ ಐಎನ್ಎಸ್ ವಿಕ್ರಾಂತ್ ಹಡಗಿನ ಬಗ್ಗೆ ಮಾಹಿತಿ ಕೇಳಿದ್ದ ಕೇರಳದ ವ್ಯಕ್ತಿಯನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ಬಂಧಿತನನ್ನು ಕೇರಳದ ಕೋಝಿಕೋಡ್ ಎಲ್ತೂರ್ ನಿವಾಸಿ ಮುಜೀಬ್ ರೆಹಮಾಮ್ ಎಂದು ಗುರುತಿಸಲಾಗಿದೆ. ಆತ ತಾನು ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಕೊಚ್ಚಿ ನೌಕಾ ಪ್ರಧಾನ ಕಚೇರಿಗೆ ಕರೆ ಮಾಡಿ,ಐಎನ್ಎಸ್ ವಿಕ್ರಾಂತ್ ಬಗ್ಗೆ ಮಾಹಿತಿ ಕೇಳಿದ್ದ. ಅಲ್ಲದೇ ವಿಕ್ರಾಂತ್ ಇರುವ ನಿಖರವಾದ ಸ್ಥಳವನ್ನು ತಿಳಿಸುವಂತೆ ಹೇಳಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತನ ಮಾತುಗಳಿಂದ ಅನುಮಾನಗೊಂಡ ನೌಕಪಡೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿಯ ಬೆನ್ನಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಂಧಿತನನ್ನು ನೌಕಾಪಡೆ ಅಧಿಕಾರಿಗಳು ಹಾಗೂ ಐಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಮುಜೀಬ್ ರೆಹಮಾಮ್ ಬಂಧನವಾಗುತ್ತಿದ್ದಂತೆ ಆತ ಖಿನ್ನತೆಯಿಂದ ಬಳತ್ತಿದ್ದಾನೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.














