ಮನೆ ಕಾನೂನು 115 ಮಂದಿ ವಿರುದ್ಧ ಎಫ್‌ ಐಆರ್‌, 99 ಮಕ್ಕಳ ರಕ್ಷಣೆ: ಹೈಕೋರ್ಟ್‌ ಗೆ ಸರ್ಕಾರದ ವಿವರಣೆ

115 ಮಂದಿ ವಿರುದ್ಧ ಎಫ್‌ ಐಆರ್‌, 99 ಮಕ್ಕಳ ರಕ್ಷಣೆ: ಹೈಕೋರ್ಟ್‌ ಗೆ ಸರ್ಕಾರದ ವಿವರಣೆ

0

ಬೆಂಗಳೂರು ರಸ್ತೆ ಬದಿ, ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವುದು ಮತ್ತು ಆಟಿಕೆಗಳನ್ನು ಮಾರಾಟಕ್ಕೆ ಮಕ್ಕಳನ್ನು ಬಳಕೆ ಮಾಡಿವವರ ವಿರುದ್ಧ ಕರ್ನಾಟಕ ಭಿಕ್ಷಾಟನೆ ನಿರ್ಮೂಲನಾ ಕಾಯಿದೆಯಡಿಯಲ್ಲಿ 2021ರಿಂದ ಈವರೆಗೂ 115 ಮಂದಿಯ ವಿರುದ್ಧ ಎಫ್‌ ಐಆರ್ ದಾಖಲಿಸಿದ್ದು, 99 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ ಗೆ ಮಾಹಿತಿ ನೀಡಿದೆ.

ಬೆಂಗಳೂರಿನ ರಸ್ತೆಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಯಲ್ಲಿ ತೊಡಗಿಸಲಾಗಿದೆ ಎಂದು ಆಕ್ಷೇಪಿಸಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಸರ್ಕಾರದ ಪರವಾಗಿ ಡಿಎಸ್‌ ಪಿ ಯೋಗೇಂದ್ರ ಕುಮಾರ್ ಅಫಿಡವಿಟ್‌ ಸಲ್ಲಿಸಿದ್ದಾರೆ.

ಭಿಕ್ಷಾಟನೆ ಮಾಡುತ್ತಿದ್ದ 37 ಪುರುಷರು, 74 ಮಹಿಳೆಯರು, 54 ಗಂಡು ಮಕ್ಕಳು ಹಾಗೂ 45 ಹೆಣ್ಣು ಮಕ್ಕಳು ಸೇರಿ ಒಟ್ಟು 210 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಇದರ ಜೊತೆಗೆ 115 ಎಫ್‌ ಐಆರ್‌ ಗಳನ್ನು ದಾಖಲಿಸಿ 82 ಪುರುಷರು ಹಾಗೂ 62 ಮಹಿಳೆಯರು ಸೇರಿ 144 ಮಂದಿಯನ್ನು ಬಂಧಿಸಲಾಗಿದೆ ಎಂದು ಅಫಿಡವಿಟ್‌ ನಲ್ಲಿ ವಿವರಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ ಅವರು “ರಕ್ಷಣೆ ಹೆಸರಿನಲ್ಲಿ ಸಣ್ಣ ಮಕ್ಕಳನ್ನು ವಶಕ್ಕೆ ಪಡೆದಿದ್ದು, ಅಂತಹ ಮಕ್ಕಳು ತನ್ನ ತಾಯಿಯಿಂದ ದೂರಾಗುವ ಸಾಧ್ಯತೆಯಿದೆ” ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಸರ್ಕಾರದ ಪರ ವಕೀಲರು “ಮಕ್ಕಳು ತಾಯಿಯೊಂದಿಗೆ ಇರುವುದಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ” ಎಂದು ವಿವರಿಸಿದರು.

ಆಗ ಪೀಠವು “ಎದೆಹಾಲು ಕುಡಿಯುವಂತಹ ಮಕ್ಕಳನ್ನು ತಾಯಿಯಿಂದ ದೂರವಾಗದಂತೆ ನೋಡಿಕೊಳ್ಳಬೇಕು. ಜೊತೆಗೆ, ಹಾಲುಣಿಸುವ ತಾಯಿ ಮತ್ತು ಮಕ್ಕಳನ್ನು ಮಕ್ಕಳ ಗೃಹಕ್ಕೆ ಸ್ಥಳಾಂತರ ಮಾಡಬೇಕು” ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿತು.

ಇದೇ ವೇಳೆ ಬಿಬಿಎಂಪಿ ಪರ ವಕೀಲರು, ಭಿಕ್ಷುಕರ ರಕ್ಷಣೆಗಾಗಿ ಬಿಬಿಎಂಪಿಯಿಂದ ಸಂಗ್ರಹಿಸಿರುವ ಭಿಕ್ಷುಕರ ಸೆಸ್‌ನ ಬಾಕಿ ಇರುವ 55.65 ಕೋಟಿ ರೂಪಾಯಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಮುಂದಿನ ಆರು ತಿಂಗಳಲ್ಲಿ ಮೂರು ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಪೀಠವು ಮುಂದಿನ ನಾಲ್ಕು ತಿಂಗಳಲ್ಲಿ ಎಲ್ಲ ಬಾಕಿ ಮೊತ್ತವನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿ ಮಾಡಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿ ಅರ್ಜಿಯ ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.

ಹಿಂದಿನ ಲೇಖನರಮಣೀಯ ಹೊನ್ನಾವರ
ಮುಂದಿನ ಲೇಖನರಾಜ್ಯದ ವಿದ್ಯುತ್‌ ಉತ್ಪಾದನೆ ಸ್ಥಾಪಿತ ಸಾಮರ್ಥ್ಯಕ್ಕಿಂತ ಕುಸಿದಿರುವುದು ಏಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ