ತುಮಕೂರು: ನಿಂತಿದ್ದ ಕ್ರೂಸರ್ ವಾಹನಕ್ಕೆ ಹಿಂಬದಿಯಿಂದ ಬಂದ ಟೆಂಪೊ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ಬೆಳಗಿನ ಜಾವ 3:30ರ ಸಮಯದಲ್ಲಿ ಸಂಭವಿಸಿದೆ.
ಮೃತರನ್ನು ಗಂಗಾವತಿ ಮೂಲದ ಕ್ರೂಸರ್ ಚಾಲಕ ಶಂಕರ್ (35), ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ (40) ಎಂದು ಗುರುತಿಸಲಾಗಿದೆ.
ಪಡಿತರ ವಿತರಣಾ ಕೇಂದ್ರದ ಮಾಲೀಕರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯ ಕೋರ ಸಮೀಪ ಕ್ರೂಸರ್ ವಾಹನದ ಹಿಂಬದಿಯ ಟೈಯರ್ ಪಂಕ್ಚರ್ ಆಗಿದೆ. ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೈಯರ್ ಬದಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಟೆಂಪೊ ಡಿಕ್ಕಿ ಹೊಡೆದಿದೆ.
ಮೃತ ದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತುಮಕೂರು ಗ್ರಾಮಾಂತರ ಸಿಪಿಐ ಲಕ್ಷ್ಮೀಕಾಂತ್, ಕೋರ ಪಿಎಸ್ ಐ ಸಂಗಮೇಶ್ ಮೇಟಿ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.














