ಹೊಸದಿಲ್ಲಿ : ಪ್ರಶ್ನೆ ಪತ್ರಿಕೆ ಹೇಳಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರವನ್ನು ಲೋಕಸಭೆ ವಿಪಕ್ಷ ನಾಯಕ, ಸಂಸದ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆರು ರಾಜ್ಯಗಳಲ್ಲಿ ೮೫ ಲಕ್ಷ ಮಕ್ಕಳ ಭವಿಷ್ಯ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ, ಪ್ರಶ್ನೆ ಪತ್ರಿಕೆ ಸೋರಿಕೆಯು ಒಂದು ವೈಫಲ್ಯತೆಯಾಗಿದ್ದು, ಅದು ಗಂಭೀರವಾದ ಸಮಸ್ಯೆಯಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಸರ್ಕಾರಗಳು ಭಿನ್ನಾಭಿಪ್ರಾಯವನ್ನು ತೊರೆದು ಕಠಿಣ ಕ್ರಮವನ್ನು ತೆಗೆದುಕೊಂಡರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯ” ಎಂದು ತಿಳಿಸಿದ್ದಾರೆ. “ಆರು ರಾಜ್ಯಗಳಲ್ಲಿ ೮೫ ಲಕ್ಷ ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ನಮ್ಮ ದೇಶದ ಯುವಕರಿಗೆ ಅತೀ ಅಪಾಯಕಾರಿ ಚಕ್ರವ್ಯೂಹವಾಗಿ ಮಾರ್ಪಟ್ಟಿದೆ” ಎಂದು ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದು ಕಷ್ಟಪಟ್ಟು ಕಲಿಯುವ ವಿದ್ಯಾರ್ಥಿಗಳನ್ನು ಮತ್ತು ಅವರ ಕುಟುಂಬವನ್ನು ಅನಿಶ್ಚಿತತೆ ಮತ್ತು ಚಿಂತೆಗೆ ದೂಡುತ್ತದೆ. ಅವರ ಪರಿಶ್ರಮದ ಫಲವನ್ನು ಅವರಿಂದ ಕಿತ್ತುಕೊಂಡತಾಗುತ್ತದೆ. ಇದು ಮುಂದಿನ ಪೀಳಿಗೆಗೆ ಅಪ್ರಾಮಾಣಿಕತೆಯು ಕಷ್ಟಪಡುವುದಕ್ಕಿಂತ ಉತ್ತಮ ಎಂಬ ತಪ್ಪು ಸಂದೇಶವನ್ನು ನೀಡುತ್ತದೆ” ಎಂದು ಕಾಂಗ್ರೆಸ್ ನಾಯಕ ಆತಂಕ ವ್ಯಕ್ತಪಡಿಸಿದ್ದಾರೆ.
ನೀಟ್ ಪೇಪರ್ ಸೋರಿಕೆಯು ದೇಶದಲ್ಲಿ ಅತೀ ದೊಡ್ಡ ಸುದ್ದಿಯಾಗಿ ಒಂದು ವರ್ಷವೂ ಆಗಿಲ್ಲ. ನಮ್ಮ ವಿರೋಧದ ಬೆನ್ನಲ್ಲೇ ಮೋದಿ ಸರ್ಕಾರ ಹೊಸ ಕಾನೂನಿನ ಮೂಲಕ ಅಭ್ಯರ್ಥಿಗಳನ್ನು ಸಮಾಧಾನಪಡಿಸಿತು. ಆದರೆ ಇತ್ತೀಚೆಗೆ ಆಗಾಗ ಸುದ್ದಿಯಾಗುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ನೋಡಿದಾಗ ಈ ಕಾನೂನು ಕೂಡಾ ವೈಫಲ್ಯವಾಗಿದೆ ಎಂದು ಖಚಿತ ಪಡಿಸುತ್ತದೆ ಎಂದು ಅಭಿಪ್ರಾಯಿಸಿದರು.
ಈ ಗಂಭೀರ ಸಮಸ್ಯೆಯು ಆಡಳಿತಾತ್ಮಕ ವೈಫಲ್ಯವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಸರ್ಕಾರಗಳು ಭಿನ್ನಾಭಿಪ್ರಾಯವನ್ನು ತೊರೆದು ಕಠಿಣ ಕ್ರಮವನ್ನು ತೆಗೆದುಕೊಂಡರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.