ಬೆಂಗಳೂರು : ರಾಜ್ಯದಲ್ಲಿ ಅಡುಗೆ ಅನಿಲ, ಆಟೋ ಗ್ಯಾಸ್ ಸಮಸ್ಯೆಯಾಗಿದ್ದು, ನಮ್ಮ ಕೈಯಲ್ಲಿ ಏನೂ ಇಲ್ಲ. ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಆಟೋ ಚಾಲಕರಿಗೆ ತೊಂದರೆ ಆಗುತ್ತಿದೆ. ಹೋಟೆಲ್ನವರಿಗೆ ತೊಂದರೆಯಾಗಿದೆ. ಮನೆಯಲ್ಲಿ ಹೇಗೋ ಸ್ಟೌವ್ನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ಹೋಟೆಲ್ನಲ್ಲಿ ಪಾಪ ಹೇಗೋ ಮಾಡಿಕೊಳ್ಳುತ್ತಿದ್ದಾರೆ. ಗ್ಯಾಸ್ ಸಮಸ್ಯೆಯನ್ನು ಕೂಡಲೇ ಕೇಂದ್ರ ಸರ್ಕಾರ ಬಗೆಹರಿಸಬೇಕು. ಅದರತ್ತ ಗಮನ ಹರಿಸಬೇಕು ನಮ್ಮ ಕೈಲಿ ಏನೂ ಇಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ನೀತಿ ರೂಪಿಸಬೇಕಿತ್ತು. ಮುಂಜಾಗ್ರತೆ ಮಾಡಬೇಕಾಗಿತ್ತು ಆದರೆ ಕೇಂದ್ರ ವಿಫಲ ಆಗಿದೆ. ಇದರ ಬಗ್ಗೆ ಬಿಜೆಪಿಯವರು ಯಾಕೆ ಮಾತಾಡುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು, ನಮ್ಮಿಂದ ತೊಂದ್ರೆ ಆಗಿದೆ, ನಮ್ಮನ್ನ ಕ್ಷಮಿಸಿ ಎಂದು ಹೇಳಬೇಕು. ಅವರು ಮಾಡಿರೋ ತೊಂದರೆ ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಉಪಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ವಾತಾವರಣ ಚೆನ್ನಾಗಿದೆ. ಬಾಗಲಕೋಟೆ, ದಾವಣಗೆರೆ ಎರಡು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಪ್ರತಿ ಮನೆಗೂ ಹೋಗಿ ಗ್ಯಾರಂಟಿ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಗ್ಯಾರಂಟಿಯಿಂದ ಬಿಜೆಪಿಗೆ ವೋಟು ಹಾಕಿದವರು ಕೂಡ ನಾವು ಕಾಂಗ್ರೆಸ್ಗೆ ಮತ ಹಾಕ್ತೀವಿ ಅಂತಿದ್ದಾರೆ.
ಗ್ಯಾರಂಟಿ ಉಳಿಸಿಕೊಳ್ಳಬೇಕು, ಈ ಬೆಲೆ ಏರಿಕೆಯಿಂದ ನಮಗೆ ತೊಂದರೆ ಆಗ್ತಿದೆ ಎಂದು ಸ್ಮರಿಸಿಕೊಳ್ಳುತ್ತಿದ್ದಾರೆ. ಕಳೆದ ಬಾರಿಗಿಂತ ಹೆಚ್ಚಿನ ಮತದಿಂದ ಗೆಲ್ಲುತ್ತಾರೆ. ಎರಡು ದಿನ ಪ್ರಚಾರಕ್ಕೆ ಇಂದು ಕೇರಳಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ಬಂದು ದಾವಣಗೆರೆ ಅಥವಾ ಬಾಗಲಕೋಟೆಗೆ ಕಡೆಯ ದಿನದ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ.















