ಬೆಳಗಾವಿ : ಐಪಿಎಲ್ ಮಾತ್ರ ಅಲ್ಲ ಮುಂದಿನ ಟಿ20 ವಿಶ್ವಕಪ್ ಕ್ರಿಕೆಟ್ ಆಡಿಸುವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.
ಸಿಎಂ, ಡಿಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಪಿಎಲ್ ಮಾತ್ರ ಅಲ್ಲ ಮುಂದೆ ಬರುವ ನ್ಯೂಜಿಲೆಂಡ್ ಮತ್ತು ಭಾರತದ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವಂತಾಗಬೇಕು. ನಾವು ನಿಮಗೆ ಸಹಾಯ ಮಾಡುತ್ತೇವೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಆಶ್ವಾಸನೆ ನೀಡಿದ್ದಾರೆ ಎಂದರು.
ನಡೆದ ಚುನಾವಣೆಯಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರು ಕೆಎಸ್ಸಿಎ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಟೀಮ್ ಗೇಮ್ ಚೇಂಜರ್ಸ್ ತಂಡವನ್ನು ಪ್ರತಿನಿಧಿಸಿದ್ದ ಪ್ರಸಾದ್ ಅವರು 749 ಹಾಗೂ ಅವರ ಪ್ರತಿಸ್ಪರ್ಧಿ ಟೀಮ್ ಬ್ರಿಜೇಶ್ ಬಣದಿಂದ ಕಣಕ್ಕಿಳಿದಿದ್ದ ದಿ ಪ್ರಿಂಟರ್ಸ್ ಲಿಮಿಟೆಡ್ ನಿರ್ದೇಶಕರಾದ ಕೆ.ಎನ್. ಶಾಂತಕುಮಾರ್ ಅವರು 558 ಮತ ಗಳಿಸಿದ್ದರು.
ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳು ಹೊರಗೆ ಹೋಗಬಾರದು. ಇದು ಹೊಸ ಕಾರ್ಯಕಾರಿ ಸಮಿತಿಯಾಗಿದ್ದು ಎಲ್ಲರೂ ಇದ್ದಾರೆ. ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂಬ ಭರವಸೆ ಇದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಸೂಚನೆ ಕಾಣುತ್ತಿದೆ ಎಂದು ತಿಳಿಸಿದರು.















