ಮನೆ ಕಾನೂನು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ

ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ: ಹೈಕೋರ್ಟ್ ಮೆಟ್ಟಿಲೇರಲು ಸಿದ್ದರಾಮಯ್ಯ ಪರ ವಕೀಲರ ಸಿದ್ಧತೆ

0

ಬೆಂಗಳೂರು: ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ ​ಗೆ ಅನುಮತಿ ಕೊಟ್ಟ ರಾಜ್ಯಪಾಲರ ನಿರ್ಧಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಾನೂನು ಸಮರ ಸಾರಿದ್ದಾರೆ. ಇದರ ಭಾಗವಾಗಿ ಕಾನೂನು ಸಲಹೆಗಾರ ಪೊನ್ನಣ್ಣ ಜತೆ ಸಭೆ ನಡೆಸಿದ್ದಾರೆ. ಮುಂದೆ ಯಾವ ರೀತಿ ಹೋರಾಡಬೇಕು ಎಂಬ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ.

Join Our Whatsapp Group

ರಾಜ್ಯಪಾಲರ ಪ್ರಾಸಿಕ್ಯೂಷನ್​ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಸಿಎಂ ಪರ ವಕೀಲರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸೋಮವಾರವೇ ಹೈಕೋರ್ಟ್ ​ಗೆ ಅರ್ಜಿ ಸಲ್ಲಿಸಲು ಯೋಜನೆ ಹಾಕಿಕೊಂಡಿದ್ದಾರೆ. ರಾಜ್ಯಪಾಲರ ಅನುಮತಿ ವಿರುದ್ಧ ಹೈಕೋರ್ಟ್​ನಲ್ಲಿ ಪ್ರಶ್ನಿಸಲು ತೀರ್ಮಾನ ಮಾಡಿದ್ದು, ಕಾನೂನು ಸಲಹೆಯಂತೆ ನ್ಯಾಯಾಲಯದಲ್ಲಿ‌ ಪ್ರಶ್ನಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡುತ್ತಿದ್ದಂತೆಯೇ ದೂರು ದಾರ ಪ್ರದೀಪ್ ಕೇವಿಯಟ್ ಸಲ್ಲಿಸಿದ್ದಾರೆ. ತಮ್ಮ ವಾದ ಆಲಿಸದೇ ಈ ಕೇಸ್‌ ನಲ್ಲಿ ಮಧ್ಯಂತರ ಆದೇಶ ನೀಡದಂತೆ ಕೇವಿಯಟ್ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಾದವೇನು?

ಕಾನೂನಿನ ಅನ್ವಯ ಪರಿಹಾರ ರೂಪದ ನಿವೇಶನ ಪಡೆದಿರುವುದು ಸ್ಪಷ್ಟವಾಗಿದೆ. ಬಿಜೆಪಿ ಸರ್ಕಾರದಲ್ಲೇ ನಡಾವಳಿ ಆಗಿದೆ, ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದೆ. 2023 ಅಕ್ಟೋಬರ್​ನಲ್ಲೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಅದಕ್ಕೂ‌ ಮುನ್ನವೇ ಪರಿಹಾರ ರೂಪದ ನಿವೇಶನ ನೀಡಲಾಗಿದೆ. ಮುಡಾದವರು ನಮಗೆ ಸೇರಿದ ಜಾಗ 3.16 ಎಕರೆಯನ್ನ ಒತ್ತುವರಿ ಮಾಡಿಕೊಂಡಿದ್ದಾರೆ. 50:50 ಅನುಪಾತದಲ್ಲೇ ಜಾಗ ಕೊಡಿ ಎಂದು ಮುಡಾಗೆ ಹೇಳಿದ್ದೆವು. ಇದೇ ಜಾಗದಲ್ಲೇ ನಮಗೆ ಸೈಟ್​ ಕೊಡಿ ಎಂದು ನಾವು ಕೇಳಿಲ್ಲ. ನಾವೇನು ವಿಜಯನಗರ ಲೇಔಟ್​ನಲ್ಲೇ ಕೊಡಿ ಅಂತಾ ಕೇಳಿಲ್ಲ. ಜಾಗ ಕೊಟ್ಟಾಗ 2021ರಲ್ಲಿ ಬಿಜೆಪಿಯವರು ಅಧಿಕಾರದಲ್ಲಿದ್ದರು ಎಂಬುದು ಸಿಎಂ ಸಿದ್ದರಾಮಯ್ಯ ವಾದ.

ಸಿಎಂಗೆ ಸಚಿವರ ಅಭಯ

ಸಿಎಂಗೆ ಸಚಿವರ ಬಲವೂ ಸಿಕ್ಕಿದೆ. ಇವತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್​ ಸೇರಿ ಸಚಿವರ ದಂಡೇ ಬಂತು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪರ ನಿಂತು, ಕಾನೂನು ಹೋರಾಟ ಮಾಡುವ ಸಂಬಂಧ ಚರ್ಚೆ ಮಾಡಿದರು. ಇದೇ ವೇಳೆ ಸಿಎಂಗೆ ಅಭಯ ನೀಡಿರುವ ಸಚಿವರು ನಾವು ನಿಮ್ಮ ಜೊತೆಗಿದ್ದೇವೆ, ಧೈರ್ಯವಾಗಿ ಕಾನೂನು ಹೋರಾಟ ನಡೆಸಿ ಅಂತ ಹೇಳಿದ್ದಾರೆ ಎನ್ನಲಾಗಿದೆ.