ಮನೆ ರಾಜ್ಯ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಅಪಮಾನ: ಆರಗ ಜ್ಞಾನೇಂದ್ರ ಆರೋಪ

ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಅಪಮಾನ: ಆರಗ ಜ್ಞಾನೇಂದ್ರ ಆರೋಪ

0

ತೀರ್ಥಹಳ್ಳಿ : ಪ್ರತಿವರ್ಷ ಅಡಿಕೆ ಕೊಯ್ಲು ಸಂದರ್ಭ ಅಡಿಕೆ ಸುಲಿಯುವಾಗ ಬಂಡಾಟ ಮಾಡಿ ಅಡಿಕೆ ಸುಲಿತ ಮಾಡುತ್ತೇವೆ. ಈ ಬಾರಿ ಅದಕ್ಕೆ ಒಂದು ಅನಿಷ್ಠ ಒಕ್ಕರಿಸಿದೆ. ಅಡಿಕೆ ಬೆಳೆಗಾರನನ್ನು ಅಪಮಾನ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

ನ.27ರ ಸೋಮವಾರ ಅಡಿಕೆ ಸುಲಿಯುವ ಯಂತ್ರದ ವಿಚಾರವಾಗಿ ರೈತರಿಗೆ ಮೆಸ್ಕಾಂ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಕಚೇರಿಯಿಂದ ಮೆಸ್ಕಾಂ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು.

ಸರ್ಕಾರ ರೈತರ ಬಳಿ ಅಧಿಕಾರಿಗಳನ್ನು ಕಳಿಸಿ ದಂಡದ ರೂಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ನಿಮಗೆ ಗೆಲ್ಲುತ್ತೇವೆ ಎಂಬ ಭರವಸೆ ಇರಲಿಲ್ಲ. ಉಚಿತ ಗ್ಯಾರೆಂಟಿ ಕೊಡುವ ಭರವಸೆ ನೀಡಿ ಈಗ ಸುಲಿಗೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಉಚಿತ ಗ್ಯಾರೆಂಟಿ ಯೋಜನೆಯಿಂದ ಸರ್ಕಾರದ ಬಳಿ ಹಣವಿಲ್ಲ. ಮೆಸ್ಕಾಂ ಹಾಗೂ ಬೆಸ್ಕಾಂಗೆ ಹಣ ಕಟ್ಟಿಲ್ಲ. ಇನ್ನೆರಡು ತಿಂಗಳು ಕಳೆದರೆ ಅಲ್ಲಿನ ಸಿಬ್ಬಂದಿಗಳಿಗೂ ಸಂಬಳ ಸಿಗುವುದು ಕಷ್ಟ. ಹಾಗಾಗಿ ಮನೆಯ ಮೀಟರ್ ನಲ್ಲಿ ಮೋಟಾರ್ ಅಳವಡಿಸಿಕೊಂಡಿರುವ ರೈತರ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಸರ್ಕಾರ ಮಾಡುತ್ತಿದೆ. ಮನೆಯ ಮೀಟರ್ ನಲ್ಲಿ ಅಡಿಕೆ ಸುಲಿಯುವ ಯಂತ್ರ ಉಪಯೋಗಿಸುತ್ತಿರುವ ರೈತರಿಗೆ ಸರ್ಕಾರ ತೊಂದರೆ ನೀಡಬಾರದು ಎಂದರು.

ಬಿಜೆಪಿ ಸರ್ಕಾರ ಇರುವಾಗ ಈ ಕಾಯ್ದೆ ಮಾಡಿದ್ದೂ ಎಂದು ಹೇಳುತ್ತಾರೆ.  ಡಿ ಕೆ ಶಿವಕುಮಾರ್ ಅವರ ವಿರುದ್ದ ಇದ್ದ ಸಿಬಿಐ ಪ್ರಕರಣವನ್ನು ವಾಪಾಸ್ ತೆಗೆದುಕೊಂಡ ಹಾಗೆ ಇದನ್ನು ತೆಗೆದುಕೊಳ್ಳಬಹುದಲ್ಲವೇ? ನಿಮ್ಮ ಡಿ.ಕೆ. ಶಿವಕುಮಾರ್ ಅವರಿಗೊಂದು ಕಾನೂನು, ನಮ್ಮ ಅಡಕೆ ಬೆಳೆಗಾರರಿಗೊಂದು ಕಾನೂನಾ? ನಮ್ಮ ಸರ್ಕಾರ ಇರುವಾಗ ರಾಜ್ಯ ನಾಲ್ಕು ಸಾವಿರ ಹಾಗೂ ಕೇಂದ್ರ ಸರ್ಕಾರ ಆರು ಸಾವಿರ ರೈತರಿಗೆ ಕೊಡುತ್ತಿತ್ತು. ಅದನ್ನು ನೀವು ತೆಗೆದು ಹಾಕಿದ್ರಿ, ರೈತರಿಗೆ ಕೊಡುವುದನ್ನು ನಿಲ್ಲಿಸಿ ಈಗ ಅವರ ಬಳಿ ಸುಲಿಗೆ ಮಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್‌ ಅಧಿಕಾರಿ ಎಲ್. ಕೆ ಅತೀಕ್‌ ನೇಮಕ
ಮುಂದಿನ ಲೇಖನಡಿಸೆಂಬರ್ 29 ರಂದು “ಅಲೆಕ್ಸಾ’ ತೆರೆಗೆ