ಮನೆ ರಾಜ್ಯ ಹಸಿರು ಪಟಾಕಿ, ಪರಿಸರ ಸ್ನೇಹಿ ಮೂರ್ತಿಗಷ್ಟೇ ಅವಕಾಶ: ಈಶ್ವರ ಖಂಡ್ರೆ

ಹಸಿರು ಪಟಾಕಿ, ಪರಿಸರ ಸ್ನೇಹಿ ಮೂರ್ತಿಗಷ್ಟೇ ಅವಕಾಶ: ಈಶ್ವರ ಖಂಡ್ರೆ

ಪಿಓಪಿ ಮೂರ್ತಿ ತಯಾರಕರು, ಪಟಾಕಿ ಮಾರಾಟಗಾರರಿಗೆ 7 ತಿಂಗಳ ಮೊದಲೇ ನೋಟಿಸ್

0

ಬೆಂಗಳೂರು: ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಬಾರಿ 7 ತಿಂಗಳ ಮೊದಲೇ ಕಾರ್ಯೋನ್ಮುಖರಾಗಿದ್ದು, ಪಿಓಪಿ ಮೂರ್ತಿಗಳ ತಯಾರಕರು ಮತ್ತು ಪಟಾಕಿ ಮಾರಾಟಗಾರರಿಗೆ ಸ್ಪಷ್ಟ ಸೂಚನೆಯೊಂದಿಗೆ ನೋಟಿಸ್ ನೀಡಲು ಆದೇಶ ನೀಡಿದ್ದಾರೆ.

ಈ ಸಂಬಂಧ ಪರಿಸರ ಇಲಾಖೆಯ ಪ್ರಧಾನಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, ಪ್ರಕೃತಿ ಪರಿಸರ ಉಳಿದರಷ್ಟೇ ನಾವು ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಜಲ ಮೂಲಗಳನ್ನು ಕಲುಷಿತಗೊಳಿಸುವ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿ.ಓ.ಪಿ.) ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಈ ಬಗ್ಗೆ ತಯಾರಕರಿಗೆ ಹಬ್ಬಕ್ಕೆ 7 ತಿಂಗಳು ಮುಂಚಿತವಾಗಿಯೇ ಸೂಕ್ತ ತಿಳಿವಳಿಕೆಯೊಂದಿಗೆ ನೋಟಿಸ್ ನೀಡುವಂತೆ ಸೂಚಿಸಿದ್ದಾರೆ.

ಪ್ರತಿಬಾರಿ ನೀರಿನಲ್ಲಿ ವಿಸರ್ಜನೆ ಮಾಡುವ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಮೂರ್ತಿಗಳ ತಯಾರಕರು ತಮಗೆ ಮೊದಲೇ ನೋಟಿಸ್ ನೀಡಿದ್ದರೆ, ತಾವು ತಯಾರಿಕೆಯನ್ನೇ ಮಾಡುತ್ತಿರಲಿಲ್ಲ. ಈಗ ತಯಾರಿಸುವ ಮೂರ್ತಿ ಏನು ಮಾಡುವುದು, ತಮಗೆ ನಷ್ಟವಾಗುತ್ತದೆ ಎಂದು ಸಬೂಬು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ 7 ತಿಂಗಳ ಮೊದಲೇ ಎಲ್ಲ ಪಿಓಪಿ ತಯಾರಕರಿಗೆ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಮಾಡುವಂತೆ ಮತ್ತು ಅದಕ್ಕೆ ರಾಸಾಯನಿಕ ಬಣ್ಣ ಲೇಪನ ಮಾಡದಂತೆ ಸೂಚಿಸಿ ನೋಟಿಸ್ ನೀಡುವಂತೆ ತಿಳಿಸಿದ್ದಾರೆ.

ಹಸಿರು ಪಟಾಕಿಗೆ ಮಾತ್ರ ಅವಕಾಶ:

ಅದೇ ರೀತಿ ಹೆಚ್ಚು ವಾಯು ಮಾಲಿನ್ಯಮತ್ತು ಶಬ್ದ ಮಾಲಿನ್ಯ ಉಂಟು ಮಾಡುವ ಸಾಂಪ್ರದಾಯಿಕ ಪಟಾಕಿಗಳು ಸಹ ಪರಿಸರಕ್ಕೆ ಮಾರಕವಾಗಿದ್ದು, ಈ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಅನುಸರಣೆಯ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಮಾರಾಟಗಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳಿಂದ ಪಡೆದು, ಅವರೆಲ್ಲರಿಗೂ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಮತ್ತು ಮಾರಾಟ ಮಾಡುವಂತೆ ನೋಟಿಸ್ ನೀಡಲು ಆದೇಶಿಸಿದ್ದಾರೆ.

ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಹೊರತಾಗಿ ಬೇರೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡದಂತೆ ಈಗಿನಿಂದಲೇ ಕಟ್ಟೆಚ್ಚರ ವಹಿಸುವಂತೆ ಮತ್ತು ಪಟಾಕಿ ಸಗಟು ದಾಸ್ತಾನುದಾರರಿಗೆ ಮತ್ತು ಮಾರಾಟಗಾರರಿಗೆ ಸೂಕ್ತ ತಿಳಿವಳಿಕೆ ನೀಡುವಂತೆ ಸೂಚನೆ ನೀಡಿದ್ದಾರೆ.

ಹಿಂದಿನ ಲೇಖನಶಿವಮೊಗ್ಗ: ಬೈಕ್ ನಲ್ಲಿ ಬಂದು ಮಹಿಳೆಗೆ ಚಾಕು ಇರಿದ ಅಪರಿಚಿತರು
ಮುಂದಿನ ಲೇಖನಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ – ರಣವೀರ್ ಸಿಂಗ್​