ಬೆಂಗಳೂರು(Bengaluru): ಮೈಸೂರಿನ ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿನ್ಯಾಸದ ಬಗ್ಗೆ ತಜ್ಞರ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.
ಬಸ್ ನಿಲ್ದಾಣದ ಬಗ್ಗೆ ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ರಾಮದಾಸ್ ಮಧ್ಯೆ ಉಂಟಾಗಿರುವ ಸಂಘರ್ಷದ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ರಾಮದಾಸ್ ಅವರು ಬುಧವಾರ ರಾತ್ರಿ ಭೇಟಿಯಾಗಿ ಎಲ್ಲ ವಿವರ ನೀಡಿದ್ದಾರೆ. ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಏಕೆ ಉಂಟಾಗಿದೆ ಎಂಬುದನ್ನು ತಿಳಿಯುವುದಕ್ಕಿಂತ ವಿನ್ಯಾಸದ ಬಗ್ಗೆ ಪರಿಶೀಲನೆ ನಡೆಸುವುದು ಅವಶ್ಯಕ ಎಂದು ಹೇಳಿದರು.
ಮೈಸೂರಿಗೆ ತಜ್ಞರನ್ನು ಕಳುಹಿ ಸಲಿದ್ದು, ಬಸ್ ನಿಲ್ದಾಣದ ಸ್ವರೂಪ ಪರಿಶೀಲಿಸಿ ಬಳಿಕ ವರದಿ ನೀಡುವಂತೆ ಸೂಚಿಸಲಾಗುವುದು. ವರದಿಯನ್ನು ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಗೋಪುರದ ಬಣ್ಣ ಬದಲು
ಬಸ್ ಪ್ರಯಾಣಿಕರ ತಂಗುದಾಣದ ‘ಗುಂಬಜ್’ ಸ್ವರೂಪ ವಿವಾದ ತೀವ್ರಗೊಳ್ಳುತ್ತಿದ್ದಂತೆ ಗೋಪುರಗಳ ಬಣ್ಣವನ್ನು ಗುರುವಾರ ಸಂಪೂರ್ಣವಾಗಿ ಕಡು ಕೆಂಪುಬಣ್ಣಕ್ಕೆ ಬದಲಾಯಿಸಲಾಗಿದೆ. ಬುಧವಾರ ಒಂದು ಗೋಪುರಕ್ಕಷ್ಟೇ ಕೆಂಪು ಬಣ್ಣವನ್ನು ಬಳಿಯಲಾಗಿತ್ತು. ವಿವಾದ ಪೂರ್ವದಲ್ಲಿ ತಂಗುದಾಣದ ಈ ಗೋಪುರಗಳಿಗೆ ಚಿನ್ನದ ಬಣ್ಣವನ್ನು ಬಳಿಯಲಾಗಿತ್ತು.














