ಬೆಂಗಳೂರು: 14 ಸಾವಿರ ಮೌಲ್ಯದ ರಿವಾರ್ಡ್ ಪಾಯಿಂಟ್ಸ್ ಹೆಸರಲ್ಲಿ ಹೆಚ್ಎಎಲ್ನ ಹೆಲಿಕಾಪ್ಟರ್ ವಿಭಾಗದ ಮ್ಯಾನೇಜರ್ಗೆ ಖದೀಮರು ವಂಚಿಸಿರುವ ಪ್ರಕರಣ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ದೂರುದಾರರಿಗೆ 14,453 ರೂ. ಮೌಲ್ಯದ ಬ್ಯಾಂಕ್ ರಿವಾರ್ಡ್ ಪಾಯಿಂಟ್ ಹೆಸರಿನಲ್ಲಿ ಲಿಂಕ್ವೊಳಗೊಂಡ ಸಂದೇಶವೊಂದನ್ನು ಆರೋಪಿಗಳು ಕಳಿಸಿದ್ದಾರೆ. ಸಂದೇಶವನ್ನ ನಿಜವೆಂದು ನಂಬಿದ್ದ ದೂರುದಾರರು, ಲಿಂಕ್ ಕ್ಲಿಕ್ ಮಾಡಿದಾಗ ಇಂಟರ್ನೆಟ್ ಬ್ಯಾಂಕಿಂಗ್ ಲಾಗಿನ್ ಆಗುವಂತೆ ಕೇಳಲಾಗಿದೆ. ಅದರಂತೆ ಹೈಯರ್ ಸೆಕ್ಯುರಿಟಿ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗುತ್ತಿದ್ದಂತೆಯೇ ಖಾತೆಯಿಂದ 50 ಸಾವಿರ ರೂ. ಕಡಿತವಾಗಿದೆ. ತಕ್ಷಣ ಎಚ್ಚೆತ್ತ ದೂರುದಾರರು ತಮ್ಮ ಖಾತೆಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನ ಸ್ಥಗಿತಗೊಳಿಸಿದ್ದರಿಂದ ಮತ್ತಷ್ಟು ಹಣ ವಂಚಕರ ಪಾಲಾಗುವುದು ತಪ್ಪಿದಂತಾಗಿದೆ.
ಹಣ ಕಳೆದುಕೊಂಡ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.














