ಮನೆ ರಾಜಕೀಯ ಮುಡಾ ಹಗರಣ ಸಿಬಿಐಗೆ ವಹಿಸಿ: ಸಿ.ಟಿ.ರವಿ

ಮುಡಾ ಹಗರಣ ಸಿಬಿಐಗೆ ವಹಿಸಿ: ಸಿ.ಟಿ.ರವಿ

0

ಮೈಸೂರು: ಮುಡಾ ಕಚೇರಿಯಲ್ಲಿ ನಡೆದಿರುವ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.

Join Our Whatsapp Group

ಭಾನುವಾರ ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ, ಮುಡಾ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬ್ರಹ್ಮಾಂಡ ಭ್ರಷ್ಟಾಚಾರ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯನವರ ಮೂಗಿನ‌ಡಿ ಎರಡೂವರೆ ಸಾವಿರ ಕೋಟಿಯಷ್ಟು ಸರ್ಕಾರಿ ಆಸ್ತಿ ದುರುಪಯೋಗವಾಗಿದೆ ಎಂಬ ವಿಚಾರ ಕೇಳಿ ದಿಗ್ಬ್ರಮೆಯಾಯಿತು ಎಂದರು.

ಬಡವರಿಗೆ, ದಲಿತರಿಗೆ ಕೊಡಲು ಇವರ ಬಳಿ ನಿವೇಶನಗಳಿಲ್ಲ. ಕಳ್ಳ-ಕಾಕರಿಗೆ ಬೇನಾಮಿಯಾಗಿ ಕೊಡಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ತಲೆದಂಡವಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ಇದೊಂದು ಮಹಾ ಮೋಸ. ಇದರಲ್ಲಿ ದೊಡ್ಡವರ ಕೃಪಾಕಟಾಕ್ಷ ಇದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಂತಹ ಹಗರಣಗಳು ಮೈಸೂರು ಒಂದರಲ್ಲೋ ಅಥವಾ ರಾಜ್ಯದ ಎಲ್ಲಾ ಕಡೆ ನಡೆದಿದೆಯೋ ಎನ್ನುವುದನ್ನೂ ತಿಳಿಯಬೇಕು ಎಂದು ಹೇಳಿದರು.

ಚಂದ್ರಶೇಖರನಾಥ ಸ್ವಾಮೀಜಿ ಬಗ್ಗೆ ಸಚಿವ ರಾಜಣ್ಣ ಹಗುರ ಹೇಳಿಕೆ ಕುರಿತು ಮಾತನಾಡಿ, ನಾನು ಆ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ಬಯಸಲ್ಲ. ಇದು ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದರು.

ರಾಜ್ಯದಲ್ಲಿ ಬೆಲೆ ಏರಿಕೆ, ಹಣದುಬ್ಬರದಿಂದ ಜನ ತತ್ತರಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಈ ಬಗ್ಗೆ ಹೇಳಬೇಕು. ಎಕನಾಮಿಕ್ಸ್ ಎನ್ನುವುದನ್ನು ಸಿದ್ರಾಮಿಕ್ಸ್ ಅಂತ ಮಾಡಬೇಕು. ಇವರ ಕಲ್ಯಾಣ ರಾಜ್ಯದಲ್ಲಿ ಬೆಲೆಗಳು ಗಗನಕ್ಕೇರಿವೆ. ಎಸ್ಇಪಿ ಟಿಎಸ್ಪಿ ಹಣವನ್ನೂ ದುರುಪಯೋಗ ಮಾಡಿಕೊಂಡಿದ್ದಾರೆ‌. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಬದಲು ಜಾತಿಗೊಂದು ಡಿಸಿಎಂ ಮಾಡಬೇಕು, ಅವರು ಸಿಎಂ, ಇವರು ಸಿಎಂ ಆಗಬೇಕು ಅಂತ ಒಬ್ಬರಿಗೊಬ್ಬರು ದ್ವೇಷಕಾರುತ್ತಿದ್ದಾರೆ. ಇದೇನಾ ಇವರು ಸಂವಿಧಾನ ಪಾಲಿಸೋದು? ಎಂದು ಕಾಂಗ್ರೆಸ್ ಸರ್ಕಾರ ಮತ್ತು ಕೈ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಲೇಖನತೆಲಂಗಾಣ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು
ಮುಂದಿನ ಲೇಖನಭಾರತೀಯ ನ್ಯಾಯ ಸಂಹಿತೆ: ಮೊದಲ ಎಫ್‌ಐಆರ್ ದಾಖಲು