ಗಂಗಾವತಿ (ಕೊಪ್ಪಳ ಜಿಲ್ಲೆ): ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಗುರುವಾರ ಬೆಳಗಿನ ಜಾವದಿಂದಲೇ ಸಂಭ್ರಮ ಮನೆ ಮಾಡಿದೆ.
ಹನುಮ ಜನಿಸಿದ ನಾಡು ಎಂದು ಹೆಸರಾಗಿರುವ ಅಂಜನಾದ್ರಿಯಲ್ಲಿ ಆಂಜನೇಯನ ಮೂರ್ತಿಗೆ ನಸುಕಿನ ಜಾವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೂವುಗಳಿಂದ ಅಲಂಕಾರ ಮಾಡಿ, ಹೋಮ ಹವನಗಳನ್ನು ನಡೆಸಲಾಯಿತು.
ಸಾವಿರಾರು ಭಕ್ತರು ಬುಧವಾರ ರಾತ್ರಿಯೇ ಬಂದು ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಉಳಿದುಕೊಂಡು ಬೆಳಗಿನ ಜಾವದಲ್ಲಿಯೇ ಬೆಟ್ಟದ 575 ಮೆಟ್ಟಿಲುಗಳನ್ನು ಏರಿ ಆಂಜನೇಯನ ದರ್ಶನ ಪಡೆದರು.

ಜಿಲ್ಲೆ, ಹೊರ ಜಿಲ್ಲೆಗಳು, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಬಂದಿರುವ ಭಕ್ತರು ರಾಮನಾಮ ಜಪ ಮಾಡುತ್ತಲೇ ಮೆಟ್ಟಿಲುಗಳನ್ನು ಏರಿದರು. ಕೇಸರಿ ಬಣ್ಣದ ಮಾಲೆ ಹಾಕಿಕೊಂಡು ತಲೆ ಮೇಲೆ ಮುಡಿ ಹೊತ್ತುಕೊಂಡು ಬಂದ ಭಕ್ತರು ಆಂಜನೇಯನ ಸನ್ನಿಧಿಯಲ್ಲಿ ಮುಡಿ ಬಿಚ್ಚಿ ಪೂಜೆ ಸಲ್ಲಿಸಿ ಹನುಮವ್ರತ ಪೂರ್ಣಗೊಳಿಸಿದರು.
ಭಕ್ತರಿಂದ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಿರಲಿಲ್ಲ. ದೇವಸ್ಥಾನದ ವತಿಯಿಂದಲೇ ಈ ಸೌಲಭ್ಯ ಕಲ್ಪಿಸಲಾಗಿತ್ತು.