ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ ಹಂಚಿಕೆ ಮಾಡಿದ್ದ ಆರೋಪದ ಸಂಬಂಧ ಮುಡಾದ ಮಾಜಿ ಆಯುಕ್ತ ಡಾ.ಡಿ ಬಿ ನಟೇಶ್ಗೆ ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ಕೋರಿದ್ದ ಮಧ್ಯಂತರ ಅರ್ಜಿಯ ಆದೇಶವನ್ನು ವಿಭಾಗೀಯ ಪೀಠ ಕಾಯ್ದಿರಿಸಿದೆ.
ಡಾ. ನಟೇಶ್ ಪ್ರಕರಣದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಮುಖ್ಯ ನ್ಯಾಯಮೂತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ನಡೆಸಿತು. ಜಾರಿ ನಿರ್ದೇಶನಾಲಯದ ಪರ ವಕೀಲರು “ಏಕಸದಸ್ಯ ಪೀಠದ ಆದೇಶದಿಂದಾಗಿ ತನಿಖೆಯು ಸ್ಥಗಿತವಾಗಿದ್ದು, ಆಕ್ಷೇಪಾರ್ಹವಾದ ಆದೇಶವು ಮುಂದೆ ನಡೆಸಬಹುದಾದ ಎಲ್ಲಾ ಶೋಧ ಕಾರ್ಯಗಳಿಗೆ ಅಡ್ಡಿಯಾಗಲಿದೆ. ಮೇಲ್ನೋಟಕ್ಕೆ ಏಕಸದಸ್ಯ ಪೀಠವು ದೋಷಪೂರಿತ ಎಂದು ಕಂಡುಬಂದರೆ ಅದಕ್ಕೆ ತಡೆಯಾಜ್ಞೆ ನೀಡಬೇಕು” ಎಂದು ವಾದಿಸಿದರು.
“ನಟೇಶ್ ಅವರ ಅರ್ಜಿಯನ್ನು ಪುರಸ್ಕರಿಸುವ ಮೂಲಕ ಅವರ ಮನೆಯಲ್ಲಿ ಇ ಡಿ ನಡೆಸಿರುವ ಶೋಧ ಮತ್ತು ಆನಂತರ ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 17(1)(f)ರ ಅಡಿ ದಾಖಲಿಸಿರುವ ಹೇಳಿಕೆಯು ಕಾನೂನುಬಾಹಿರ ಮತ್ತು ಅಸಿಂಧುವಾಗಲಿದೆ ಎಂದು ಹೇಳಿದೆ. ಅಲ್ಲದೇ, ಸೆಕ್ಷನ್ 50ರ ಅಡಿ ನೀಡಿರುವ ನೋಟಿಸ್ ಅನ್ನು ವಜಾಗೊಳಿಸಲಾಗಿದೆ” ಎಂದು ಆಕ್ಷೇಪಿಸಿದರು.
ಪ್ರತ್ಯುತ್ತರ ದಾಖಲಿಸುವ ವೇಳೆ ಕೇಂದ್ರ ಸರ್ಕಾರದ ವಕೀಲರು “ಕ್ರಿಮಿನಲ್ ಚಟುವಟಿಕೆಯಿಂದ ಮುಖ್ಯಮಂತ್ರಿ ಪತ್ನಿ ಬಿ ಎಂ ಪಾರ್ವತಿ ಅವರು 14 ನಿವೇಶನಗಳನ್ನು ಪಡೆದಿದ್ದಾರೆ. ಕೆಲವು ಪ್ರಭಾವಿಗಳು 14 ನಿವೇಶನಗಳನ್ನು ಹಂಚಿಕೆ ಮಾಡುವಂತೆ ನಟೇಶ್ಗೆ ನಿರ್ದೇಶಿಸಿದ್ದಾರೆ. ಎಫ್ಐಆರ್ ದಾಖಲಾಗಿರುವುದರಿಂದ ನಟೇಶ್ಗೆ ಸಮನ್ಸ್ ಜಾರಿ ಮಾಡಲಾಗಿದೆ. ಸಮನ್ಸ್ ಪ್ರಶ್ನಿಸಿರುವುದನ್ನು ಮೀರಿ ಮೂಲ ಅಪರಾಧ (ಪ್ರೆಡಿಕೇಟ್ ಅಫೆನ್ಸ್) ನಡೆದಿದೆಯೇ ಇಲ್ಲವೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಲಾಗದು. ಯಾವ ದಾಖಲೆಯನ್ನು ನೀಡಿದ್ದೇನೆ ಎಂಬುದು ನಟೇಶ್ಗೆ ತಿಳಿದಿದೆ” ಎಂದರು.
“ಇಲ್ಲಿ ಸ್ಪಷ್ಟವಾಗಿ ನೋಡಿದರೆ ಅಪರಾಧ ಪ್ರಕ್ರಿಯೆ ಇಲ್ಲ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ನಿವೇಶನಗಳನ್ನು ಹಂಚಿಕೆ ಮಾಡಿವೆ. ಅದನ್ನು ಈಗ ಇ ಡಿ ಆ ಲಕ್ಷಾಂತರ ಪ್ರಕರಣಗಳನ್ನು ಹೊರತೆಗೆದು ಇವೆಲ್ಲಾ ಅಪರಾಧ ಪ್ರಕ್ರಿಯೆ ಎಂದು ಹೇಳಿ ಮುಗ್ಧ ಜನರ ಬೆನ್ನತ್ತುತ್ತೇವೆ ಎಂದು ಹೇಳಬಹುದೇ? ಈ ಪ್ರಶ್ನೆ ಈಗ ನ್ಯಾಯಾಲಯದ ಮುಂದಿದೆ” ಎಂದರು. “ನಂಬಲು ಸಕಾರಣಗಳಿದ್ದಾಗ ತನಿಖೆ ಆರಂಭಿಸಬೇಕು. ಸಕಾರಣವಾದ ನಂಬಿಕೆಗಳು ಇಲ್ಲದಿದ್ದಾಗ ಇ ಡಿ ಪ್ರವೇಶ ಮಾಡಲಾಗದು. ಕಾರಣಗಳನ್ನು ತೋರಿಸಲು ಇ ಡಿಗೆ ಏಕಸದಸ್ಯ ಪೀಠ ಆದೇಶಿಸಿತ್ತು. ಇ ಡಿಯು ಮುಚ್ಚಿದ ಲಕೋಟೆಯಲ್ಲಿ ಕಾರಣಗಳನ್ನು ಸಲ್ಲಿಸಿತ್ತು. ಏಕಸದಸ್ಯ ಪೀಠವು ಸಕಾರಣಗಳು ಇಲ್ಲ ಎಂದಿದೆ. ಇದಕ್ಕಿಂತ ಅಧಿಕಾರ ದುರ್ಬಳಕೆಯನ್ನು ನಾನು ಹಿಂದೆಂದೂ ನೋಡಿಲ್ಲ” ಎಂದರು.
“ಸೆಕ್ಷನ್ 50ರ ಅಡಿ ನೋಟಿಸ್ ನೀಡುತ್ತಿದ್ದಂತೆ ಜಾರಿ ನಿರ್ದೇಶನಾಲಯ ಬರುತ್ತಿದೆ ಎಂಬುದು ಗೊತ್ತಾಗುತ್ತದೆ. ದೇಶಾದ್ಯಂತ ನಡೆಯುತ್ತಿರುವುದು ಇದೇ. ಸರ್ಕಾರಗಳನ್ನು ಉಳಿಸಲು ಇದು ದಾರಿಯಾಗಿದೆ. ಇದು ಬಿಜೆಪಿ ಅಧಿಕಾರದಲ್ಲಿರುವ ಒಂದೇ ಒಂದು ರಾಜ್ಯದಲ್ಲಿ ಏಕೆ ಆಗಿಲ್ಲ ಎಂದು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ? ಇದು ವಿಪಕ್ಷಗಳಿರುವ ಕರ್ನಾಟಕ, ತಮಿಳುನಾಡುಗಳಲ್ಲಿ ಆಗುತ್ತಿದೆ. ಈ ರಾಜ್ಯಗಳು ಇ ಡಿ ಬೇಗೆ ಅನುಭವಿಸುತ್ತಿವೆ. ಇದನ್ನು ನ್ಯಾಯಾಲಯ ರಕ್ಷಿಸಬೇಕು. ಅಧಿಕಾರ ಚಲಾಯಿಸುವುದರ ಹಿಂದಿನ ಉದ್ದೇಶವನ್ನು ನ್ಯಾಯಾಲಯ ನೋಡಬೇಕಿದೆ” ಎಂದರು.“ಪಾರ್ವತಿ ಅವರನ್ನು ನಾವು ಇಲ್ಲಿ ಸಮರ್ಥಿಸುತ್ತಿಲ್ಲ. ನಟೇಶ್ ಏನು ಮಾಡಿದ್ದಾರೆ? ಶಾಸನಬದ್ಧ ನಿಯಮ, ಕಾನೂನು ಮತ್ತು ಮುಡಾ ನಿರ್ಣಯದ ಪ್ರಕಾರ ನಡೆದಿದ್ದಾರೆ. ಇದಕ್ಕಾಗಿ ನಟೇಶ್ಗೆ ಏಕೆ ಶಿಕ್ಷೆ ನೀಡಬೇಕು? ಇಡಿ ಮನೆಗೆ ಬಂದರೆ ನೆರೆಹೊರೆಯವರು ಹೇಗೆ ನೋಡುತ್ತಾರೆ ಎಂಬುದನ್ನು ನ್ಯಾಯಾಲಯ ಅರಿಯಬೇಕು” ಎಂದರು.















