ಮನೆ ರಾಜ್ಯ ಪಂಚಾಯತ್‌ ಚುನಾವಣೆ: ಮೇ 17ಕ್ಕೆ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ಎಂದ ಹೈಕೋರ್ಟ್‌

ಪಂಚಾಯತ್‌ ಚುನಾವಣೆ: ಮೇ 17ಕ್ಕೆ ಚುನಾವಣಾ ಆಯೋಗದ ಅರ್ಜಿ ವಿಚಾರಣೆ ಎಂದ ಹೈಕೋರ್ಟ್‌

0

ಬೆಂಗಳೂರು (Bengaluru)-ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸುವ ಕುರಿತು ಸಲ್ಲಿಸಿರುವ ಮನವಿಯನ್ನು ಕರ್ನಾಟಕ ಹೈಕೋರ್ಟ್ ಮೇ 17 ರಂದು ವಿಚಾರಣೆ ನಡೆಸಲಿದೆ. 

ಮಂಗಳವಾರ ಸುಪ್ರೀಂ ಕೋರ್ಟ್‌ನ ಆದೇಶದಿಂದಾಗಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಚುನಾವಣಾ ಆಯೋಗವು ಹೈಕೋರ್ಟ್‌ನಲ್ಲಿ ಮನವಿ ಮಾಡಿದೆ. ಸ್ಥಳೀಯ ಸಂಸ್ಥೆಗಳಿಗೆ ತಕ್ಷಣವೇ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ನ್ಯಾಯಮೂರ್ತಿಗಳಾದ ಬಿ.ಎಂ. ಶ್ಯಾಮ್ ಪ್ರಸಾದ್ ಮತ್ತು ಎಂಜಿಎಸ್ ಕಮಲ್ ಅವರ ರಜಾಕಾಲದ ಪೀಠಕ್ಕೆ ಗುರುವಾರ ಮೆಮೊ ಸಲ್ಲಿಸಿತ್ತು.

ಚುನಾವಣಾ ಆಯೋಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು, ಜಿಪಂ- ತಾಪಂ ಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಹಾಗಾಗಿ ಈ ಪ್ರಕರಣದ ಶೀಘ್ರ ವಿಚಾರಣೆಗೆ ಮೆಮೊ ಸಲ್ಲಿಸಲಾಗಿತ್ತು. 2021 ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಜಿಪಂ-ತಾಪಂ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಯಾರಿ ನಡೆಸಿತ್ತು ಎಂದು ವಾದ ಮಂಡಿಸಿದರು.

ಕ್ಷೇತ್ರಗಳ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಮತದಾರರ ಅಂತಿಮ ಪಟ್ಟಿಯನ್ನು ಎಸ್ಇಸಿ ಪ್ರಕಟಿಸಿದೆ. ಕಳೆದ ವರ್ಷ ಮೀಸಲಾತಿ ಕರಡನ್ನು ಕೂಡ ಪ್ರಕಟಿಸಲಾಗಿತ್ತು. ಆದರೆ ಎಸ್‌ಇಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು, ರಾಜ್ಯ ಸರ್ಕಾರವು ಕ್ಷೇತ್ರಗಳನ್ನು ಮರು ವಿನ್ಯಾಸಗೊಳಿಸುವ ಮತ್ತು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಎಸ್‌ಇಸಿಯ ಅಧಿಕಾರವನ್ನು ಹಿಂತೆಗೆದುಕೊಂಡಿತು.

ಪ್ರಕ್ರಿಯೆ ನಡೆಸಲು ಸರ್ಕಾರ ಹೊಸ ಡಿಲಿಮಿಟೇಶನ್ ಪ್ಯಾನೆಲ್ ಅನ್ನು ರಚಿಸಿದೆ. ಚುನಾವಣಾ ಆಯೋಗವು ಈ ಸಮಿತಿ ರಚನೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆಗೆ ಬಾಕಿ ಇತ್ತು. ಎಸ್‌ಇಸಿಯ ಮೆಮೊದ ನಂತರ, ಹೈಕೋರ್ಟ್ ವಿಚಾರಣೆಯನ್ನು ಮೇ 17 ಕ್ಕೆ ಮುಂದೂಡಿದೆ.

ಹಿಂದಿನ ಲೇಖನರಾಜ್ಯದಲ್ಲಿ 126 ಮಂದಿಗೆ ಕೋವಿಡ್‌ ಪಾಸಿಟಿವ್‌
ಮುಂದಿನ ಲೇಖನಸಂಪುಟ ವಿಸ್ತರಣೆ: ಇನ್ನೆರಡು ದಿನಗಳಲ್ಲಿ ವರಿಷ್ಠರ ಜೊತೆ ಚರ್ಚೆ; ಸಿಎಂ ಬೊಮ್ಮಾಯಿ