ಮನೆ ರಾಜ್ಯ ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ: ಸೋಮನಾಥ ನಾಯಕ್‌ ಜೈಲು ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್‌

ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ: ಸೋಮನಾಥ ನಾಯಕ್‌ ಜೈಲು ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್‌

0

ಧರ್ಮಸ್ಥಳ (Dharmasthala)- ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ಖಾಯಂಗೊಳಿಸಿ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

ಬೆಳ್ತಂಗಡಿಯ ಸಿವಿಲ್‌ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಕೆ. ಸೋಮನಾಥ ನಾಯಕ್ ಅಪಪ್ರಚಾರ ಮಾಡುತ್ತಿದ್ದ. ಈಗ ಆತನಿಗೆ ಹೈಕೋರ್ಟ್ ಜೈಲು ಶಿಕ್ಷೆ ಖಾಯಂಗೊಳಿಸಿದೆ.

ತನಗೆ ಬೆಳ್ತಂಗಡಿ ನ್ಯಾಯಾಲಯ ವಿಧಿಸಿದ ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಹಾಗೂ ದಂಡನೆ ರದ್ದುಗೊಳಿಸುವಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್‌ ಮೇ 5ರಂದು 148 ಪುಟಗಳ ಸುದೀರ್ಘ ತೀರ್ಪು ಪ್ರಕಟಿಸಿ ಬೆಳ್ತಂಗಡಿ ಸಿವಿಲ್‌ ನ್ಯಾಯಾಲಯಗಳ ಆದೇಶ ಎತ್ತಿ ಹಿಡಿದು ಕೆ.ಸೋಮನಾಥ ನಾಯಕ್‌ ರಿಟ್‌ ಅರ್ಜಿ ವಜಾಗೊಳಿಸಿದೆ.

ತೀರ್ಪಿನಲ್ಲಿ ಹೈಕೋರ್ಟ್‌ ಹೇಳಿದ್ದೇನು?

ಸೋಮನಾಥ ನಾಯಕ್‌ ಡಾ.ಹೆಗ್ಗಡೆಯವರ ವಿರುದ್ಧ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಸುಳ್ಳು ಆರೋಪ ಮಾಡಿರುವುದು ಸಾಬೀತಾಗಿದೆ. ಡಾ.ಹೆಗ್ಗಡೆಯವರು ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿರುತ್ತಾರೆ ಎಂಬುದಾಗಿ ಮಾಡುತ್ತಿರುವ ಆರೋಪ ಸುಳ್ಳು.

ಈ ಪ್ರಕರಣದ ದಾಖಲೆಗಳನ್ನು ಪರಾಮರ್ಶಿಸುವಾಗ ಡಾ.ಹೆಗ್ಗಡೆ ಮತ್ತವರ ಕುಟುಂಬದವರು ತಮ್ಮ ಬಹಳಷ್ಟು ಆಸ್ತಿಗಳನ್ನು ಸಾಗುವಳಿದಾರರಿಗೆ ಬಿಟ್ಟುಕೊಟ್ಟಿರುವುದು ಕಂಡುಬರುತ್ತದೆ. ರಾಜ್ಯದೆಲ್ಲೆಡೆ ತುಳಿತಕ್ಕೊಳಗಾದವರ ಏಳಿಗೆಗಾಗಿ, ಮಹಿಳಾ ಸಬಲೀಕರಣಕ್ಕಾಗಿ, ಇನ್ನೂ ಹಲವಾರು ಸಮಾಜಮುಖಿ ಕೈಂಕರ್ಯಗಳನ್ನು ಡಾ.ಹೆಗ್ಗಡೆಯವರು ಮಾಡುತ್ತಿರುವುದು ಕಂಡುಬರುತ್ತದೆ.

ಡಾ.ಹೆಗ್ಗಡೆಯವರಿಗೆ ಅವರ ಸಮಾಜಮುಖಿ ಸೇವೆಗಳನ್ನು ಪರಿಗಣಿಸಿ ಪದ್ಮವಿಭೂಷಣ ಸಹಿತ ಹಲವಾರು ಉನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿರುವುದು ಕಂಡುಬರುತ್ತದೆ. ದೇಶದ ಜನತೆ ಡಾ.ಹೆಗ್ಗಡೆಯವರನ್ನು ಧರ್ಮಾಧಿಕಾರಿಯೆಂದು ಗೌರವ ಭಾವನೆಯಿಂದ ಕಾಣುತ್ತಿದ್ದಾರೆ.

ಡಾ.ಹೆಗ್ಗಡೆಯವರ ಸಚ್ಚಾರಿತ್ರ್ಯಕ್ಕೆ ಹಾಗೂ ಕ್ಷೇತ್ರದ ಘನತೆಗೆ ದಕ್ಕೆ ತರುವ ದುರುದ್ದೇಶದಿಂದ ಸೋಮನಾಥ ನಾಯಕ್‌ ಎಗ್ಗಿಲ್ಲದೆ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಸುಳ್ಳು ಆರೋಪಗಳನ್ನು ಸಾರ್ವಜನಿಕ ಮಾಧ್ಯಮ ಹಾಗೂ ಜಾಲತಾಣಗಳಲ್ಲಿ ಮಾಡುತ್ತಿರುವುದು ಕ್ಷಮಾರ್ಹವಲ್ಲ.

ಡಾ.ಹೆಗ್ಗಡೆ ಹಾಗೂ ಅವರ ಕುಟುಂಬದವರ ವಿರುದ್ಧ ಆರೋಪ ಮಾಡುವುದರ ಹೊರತು ಸಮಾಜಕ್ಕೆ ತನ್ನ ಕೊಡುಗೆ ಏನು ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವಲ್ಲಿ ಸಹ ಸೋಮನಾಥ ನಾಯಕ್‌ ವಿಫಲವಾಗಿದ್ದಾರೆ.
ನ್ಯಾಯಾಲಯದ ಮುಂದಿರುವ ದಾಖಲೆಗಳಲ್ಲಿ ಕ್ಷೇತ್ರ ಹಾಗೂ ಡಾ.ಹೆಗ್ಗಡೆಯವರಿಂದ ನಡೆಯುತ್ತಿರುವ ಸಮಾಜಮುಖಿ ಕಾರ್ಯಗಳು ಎದ್ದು ಕಾಣುತ್ತಿವೆ.

ನ್ಯಾಯಾಲಯದ ಮುಂದೆ ಸೋಮನಾಥ ನಾಯಕ್‌ ಕೊನೆ ಕ್ಷಣದಲ್ಲಿ, ತಾನು ಎಸಗಿರುವ ಅಪರಾಧ ಸಾಬೀತಾಗುವ ಎಲ್ಲ ಲಕ್ಷಣಗಳು ಕಂಡುಬಂದಾಗ ತನ್ನ ಕೃತ್ಯಗಳ ಬಗ್ಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿರುವುದು ಆತನ ದಾಷ್ಟ್ರ್ಯತನವಲ್ಲದೆ ನ್ಯಾಯಾಲಯದ ಘನತೆ ಬಗ್ಗೆ ಆತನಿಗಿರುವ ಕೇವಲ ಭಾವವನ್ನು ಬಿಂಬಿಸುತ್ತದೆ.

ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲೆ ಸಾರ್ವಜನಿಕರು ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವುದಕ್ಕಾಗಿ ಮತ್ತು ನ್ಯಾಯಾಲಯದ ಘನತೆ ರಕ್ಷಿಸುವ ಸಲುವಾಗಿ ಹಾಗೂ ಸೋಮನಾಥ ನಾಯಕ್‌ರನ್ನು ಶಿಕ್ಷಿಸದಿದ್ದಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಕಾನೂನಿನ ಉದ್ದೇಶ ಹಾಗೂ ಸಾಮರ್ಥ್ಯವನ್ನು ಸಾರುತ್ತಾ ಆದೇಶ ನೀಡಿದೆ.

ಪ್ರಕರಣದ ಎಲ್ಲ ಸಾಕ್ಷ್ಯ ಹಾಗೂ ವಾಸ್ತವಾಂಶಗಳನ್ನು ತನಿಖಾ ಹಾಗೂ ಅಪರ ನ್ಯಾಯಾಲಯ ಕೂಲಂಕಷ ವಾಗಿ ವಿರ್ಮಶಿಸಿದ ನಂತರ ಸದ್ರಿ ನ್ಯಾಯಾಲಯಗಳು ಸೋಮನಾಥ್‌ ನಾಯಕ್‌ ಎಸಗಿರುವ ಅಪರಾಧದ ತೀವ್ರತೆ ಮನಗಂಡು ನೀಡಿರುವ ಶಿಕ್ಷೆ ನ್ಯಾಯಾಲಯದ ಘನತೆ ಹಾಗೂ ಡಾ.ಹೆಗ್ಗಡೆಯವರ ಸಚ್ಚಾರಿತ್ರ್ಯಗಳ ರಕ್ಷಣೆ ನಿಟ್ಟಿನಲ್ಲಿ ಮಾಡಿರುವ ಕಾನೂನು ರೀತ್ಯಾ ಪ್ರಬುದ್ಧವಾಗಿರುವ ಆದೇಶಗಳಾಗಿರುವುದಾಗಿ ಉದ್ಘೋಷಿಸಿದೆ.

ಬೆಳ್ತಂಗಡಿ ನ್ಯಾಯಾಲಯ ಈಗಾಗಲೇ ಸೋಮನಾಥ ನಾಯಕ್‌ ವಿರುದ್ಧ ಬಂಧನದ ವಾರೆಂಟ್‌ ಹೊರಡಿಸಿದೆ.ನ್ಯಾಯಾಲಯದಲ್ಲಿ ನ್ಯಾಯವಾದಿಗಳಾದ ಕೆ. ಚಂದ್ರನಾಥ ಆರಿಗ ಬೆಂಗಳೂರು ಹಾಗೂ ರತ್ನವರ್ಮ ಬುಣ್ಣು ಬೆಳ್ತಂಗಡಿ ಕ್ಷೇತ್ರದ ಪರವಾಗಿ ವಾದಿಸಿದ್ದರು.

ಹಿಂದಿನ ಲೇಖನಪಿಎಸ್‌ ಐ ಹಗರಣ: ಹಾಸನದ ಮೂವರ ಬಂಧನ
ಮುಂದಿನ ಲೇಖನಬದರಿನಾಥ್‌ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ