ಮನೆ ರಾಜ್ಯ ಹಿಂದೂ ಬಾಲಕಿ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

ಹಿಂದೂ ಬಾಲಕಿ ಅಂತ್ಯಕ್ರಿಯೆ ನೆರವೇರಿಸಿದ ಮುಸ್ಲಿಮರು

0

ಬೆಳಗಾವಿ(Belagavi): ಮನೆಯ ಮೊದಲ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಹಿಂದೂ ಬಾಲಕಿ ಗುರುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆಕೆಯ ಅಂತ್ಯಕ್ರಿಯೆಯನ್ನು ಮುಸ್ಲಿಂ ಬಾಂಧವರು ನೆರವೇರಿಸಿರುವ ಘಟನೆ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ನಡೆದಿದೆ.

ಉಡುಪಿ ಮೂಲದ ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ.

ನಗರದಲ್ಲಿ ಬಾಲಕಿ ತನ್ನ ತಾಯಿ ಜತೆಗೆ ಮಾತ್ರ ವಾಸವಾಗಿದ್ದಳು. ಗುರುವಾರ ಬೆಳಿಗ್ಗೆ ಮಹಡಿ ಮೇಲೆ ಹತ್ತಿ ಹೂವು ಕೀಳಲು ಹೋದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಳು. ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಇಲ್ಲಿನ ಮುಸ್ಲಿಂ ಸಮುದಾಯದ ಕೆಲವರು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ಸೇರಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಳು.

ಆದರೆ ಆಸ್ಪತ್ರೆ ವೆಚ್ಛ ಭರಿಸಲು ತಾಯಿಗೆ ಸಾಧ್ಯವಾಗದ ಕಾರಣ, ವೀರಭದ್ರೇಶ್ವರ ನಗರದ ಕೆಲ ಮುಸ್ಲಿಂ ಮುಖಂಡರೇ ವೆಚ್ಚ ಭರಿಸಿದರು. ನಂತರ ಬಾಲಕಿ ಶವವನ್ನು ಮನೆಗೆ ತಂದು, ಅಂತ್ಯಸಂಸ್ಕಾರಕ್ಕೂ ವ್ಯವಸ್ಥೆ ಮಾಡಿದರು.

ಪಾಲಿಕೆ ಸದಸ್ಯರಾದ ಬಾಬಾಜಾನ್ ಮತವಾಲೆ, ಮುಖಂಡರಾದ ರಿಯಾಜ್ ಕಿಲ್ಲೇದಾರ್, ಇಮ್ರಾನ್ ಪತ್ತೆಖಾನ್, ಶಾಹೀದ್ ಪಠಾಣ, ಸಲ್ಮಾನ್ ಮಂಗಲಕಟ್ಟಿ, ರಾಜು ಶೇಖ್ ಭಾಗಿ, ಶಾಂತಕುಮಾರ್‌ ಸೇರಿಕೊಂಡು ಇಲ್ಲಿನ ಸದಾಶಿವ ನಗರದ ಸ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಬಾಲಕಿಯ ಅಂತ್ಯಕ್ರಿಯೆ ನೆರವೇರಿಸಿದರು.