ಕಲಬುರಗಿ (Kalburgi)-ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತು ಪಕ್ಕಾ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ಯಾರನ್ನ ಸೇಫ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ ಆದರೆ, ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತು ಪಕ್ಕಾ ಇದರಿಂದ ಅವರ ಕರಿಯರ್ ಹಾಳಾಗುತ್ತದೆ ಎಂದಿದ್ದಾರೆ.
ಗೃಹ ಸಚಿವರು ನನಗೆ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಡ ಅಂದಿದ್ದರು. ಆದರೆ ಈಗ ಅವರ ಪಕ್ಷದ ಶಾಸಕ ಯತ್ನಾಳ ಅವರೇ ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳು ಸರ್ಟಿಫಿಕೆಟ್ ಕೊಟ್ಟಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಹೋಗಬೇಕಿತ್ತು. ಗೃಹ ಸಚಿವರು ಯಾರನ್ನೋ ರಕ್ಷಿಸಲು ಯತ್ನಿಸುತ್ತಿದ್ದಾರೆ. ಅಧಿಕಾರದ ಮೋಹದಿಂದನೋ, ಯಾರನ್ನೋ ರಕ್ಷಿಸಲೋ ಅರಗ ಜ್ಞಾನೇಂದ್ರ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ ಇದರಿಂದ ಅವರ ಕೆರಿಯರ್ ಹಾಳಾಗುತ್ತೆ ಎಂದರು
ಪೇದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತಪಡಿಸಿದ ಅವರು, ಪೇದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿದವರೆ ಪಿಎಸ್ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಪೇದೆ ನೇಮಕಾತಿ ಅಕ್ರಮ ತನಿಖೆ ಎಲ್ಲಿಗೆ ಬಂದಿದೆ? ಎಂದು ಪ್ರಶ್ನಿಸಿದ್ದಾರೆ.
ಪ್ರಕರಣದಲ್ಲಿ ಬಂಧಿಸಲಾದ ದಿವ್ಯಾ ಹಾಗರಗಿ ಮತ್ತು ಆರ್ಡಿ ಪಾಟೀಲ್ ಕಿಂಗ್ಪಿನ್ ಅಂತಾ ಹೇಳ್ತಿದಾರೆ. ಇವರೇ ಕಿಂಗ್ಪಿನ್ ಅಂತಾ ಸರ್ಕಾರದ ಹೇಳಿಕೆಯನ್ನ ನಾ ಒಪ್ಪುವುದಿಲ್ಲ. ಮೆನ್ ಕಿಂಗ್ಪಿನ್ಗಳು ಇರೋದು ಬೇರೆ, ಅವರು ಬೆಂಗಳೂರಿನಲ್ಲಿ ಇದ್ದಾರೆ. ಅವರನ್ನ ಹೊರತರಬೇಕು ಎಂದರು.














