ಹೈದರಾಬಾದ್: ದಲಿತ ವ್ಯಕ್ತಿಯೊಬ್ಬನ ಮರ್ಯಾದೆಗೇಡು ಹತ್ಯೆ ಪ್ರಕರಣದ ಆರೋಪಿಗೆ ತೆಲಂಗಾಣದ ನಾಲ್ಗೊಂಡಾ ಜಿಲ್ಲೆಯ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ವಿಧಿಸಿದೆ.
ಅಪರಾಧಿ ಸುಭಾಷ್ ಕುಮಾರ್ ಶರ್ಮಾಗೆ ಗಲ್ಲು ಶಿಕ್ಷೆ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನಿತರ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2018ರಲ್ಲಿ ಈ ಘಟನೆ ನಡೆದಿತ್ತು.
ಮೇಲ್ವರ್ಗದ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ಪ್ರಣಯ್ ಕುಮಾರ್ (23) ಎಂಬವರನ್ನು ಹತ್ಯೆ ಮಾಡಲಾಗಿತ್ತು.
ಹತ್ಯೆ ಸಂಬಂಧ 2018ರ ಸೆಪ್ಟೆಂಬರ್ 18ರಂದು ಮಹಿಳೆಯ ತಂದೆ ಮಾರುತಿ ರಾವ್ ಹಾಗೂ ಆಕೆಯ ಸೋದರಮಾವನನ್ನೂ ಬಂಧಿಸಲಾಗಿತ್ತು. ಇವರು ಕೊಲೆಗೆ ₹ 1 ಕೋಟಿ ಸುಪಾರಿ ನೀಡಿದ್ದರು.
ಬಂಧಿತರಲ್ಲಿ ಇಬ್ಬರು ಗುಜರಾತ್ನ ಮಾಜಿ ಗೃಹ ಸಚಿವ ಹರೆನ್ ಪಾಂಡ್ಯ ಅವರ ಕೊಲೆ ಪ್ರಕರಣದಲ್ಲಿ ಖುಲಾಸೆಗೊಂಡವರು. ಪ್ರಣಯ್ ಕುಮಾರ್ ಜೊತೆ ಮದುವೆಗೆ ಮಹಿಳೆಯ ತಂದೆ ಮಾರುತಿ ರಾವ್ ವಿರೋಧ ವ್ಯಕ್ತಪಡಿಸಿದ್ದರು. ತನ್ನ ಪತಿಯನ್ನು ತಂದೆಯೇ ಕೊಲೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಮಗಳನ್ನು ಮದುವೆಯಾಗಿದ್ದಕ್ಕೆ ಪ್ರಣಯ್ ಕುಮಾರ್ರನ್ನು ಕೊಲೆ ಮಾಡಲು ಅಪರಾಧಿಗಳೊಂದಿಗೆ ಮಾರುತಿ ರಾವ್ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡವಾಗಿ ₹ 15 ಲಕ್ಷ ಪಾವತಿಯೂ ಮಾಡಿದ್ದರು.
ಮಾರುತಿ ರಾವ್ 2020ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.