ಮಹಾರಾಷ್ಟ್ರ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಮತ್ತು ಇತರೆ ವಾಹನಗಳ ಮೇಲೆ ಹರಿದು ಪರಿಣಾಮ ಸಂಭವಿಸಿದ ಸರಣಿ ಭೀಕರ ಅಪಘಾತದಲ್ಲಿ 10 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಗಡಿಭಾಗದ ಪಲಾಸ್ನೇರ್ ಗ್ರಾಮದ ಮುಂಬೈ- ಆಗ್ರಾ ಹೆದ್ದಾರಿಯಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದು, ಅವರನ್ನು ಶಿರಪುರ ಕಾಟೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ವಂಡರ್ ಸಿಮೆಂಟ್ ಕಂಪನಿಯ ಜಲ್ಲಿ ಕಲ್ಲು ತುಂಬಿದ್ದ ಕಂಟೈನರ್ ನಿಯಂತ್ರಣ ಕಳೆದುಕೊಂಡು ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಇತರ ವಾಹನಗಳ ಮೇಲೂ ಹರಿದಿದೆ. ಅಷ್ಟಕ್ಕೆ ನಿಲ್ಲದ ಅದು ಹೆದ್ದಾರಿ ಬಳಿ ಇದ್ದ ಸಣ್ಣ ಹೋಟೆಲ್ ಒಳಗೆ ನುಗ್ಗಿದೆ. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿದೆ. ಮೊದಲು ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದರು.
ಗಂಭೀರ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿದಾಗ ಮತ್ತೆ ಮೂವರು ಸಾವನ್ನಪ್ಪಿದ್ದಾರೆ.ಅಪಘಾತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು ಪೊಲೀಸರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಕಂಟೈನರ್ ನಲ್ಲಿದ್ದ ಜಲ್ಲಿ ಕಲ್ಲು ಹೆದ್ದಾರಿ ಮೇಲೆ ಬಿದ್ದಿದ್ದು ಒಂದು ಪಥದ ಸಂಚಾರ ಸ್ಥಗಿತಗೊಂಡಿದೆ. ಬಂದ್ ಆಗಿರುವ ರಸ್ತೆಯನ್ನು ಜನರೇ ಕ್ಲಿಯರ್ ಮಾಡುತ್ತಿದ್ದಾರೆ.
ದುರ್ಘಟನೆಯಲ್ಲಿ ಕಂಟೈನರ್ ಡಿಕ್ಕಿ ಹೊಡೆದ ಎಂಎಚ್ 18ಬಿಆರ್ 5057 ನಂಬರಿನ ಕಾರಿನಲ್ಲಿ ಪತಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಚಾಲಕ ಇದ್ದರು. ಪತಿ, ಮಕ್ಕಳು ಮತ್ತು ಚಾಲಕ ಗಂಭೀರವಾಗಿ ಗಾಯಗೊಂಡಿದ್ದರೆ, ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕಂಟೈನರ್, ಕಾರು, ಹಲವು ಬೈಕ್ ಗಳು ನುಜ್ಜುಗುಜ್ಜಾಗಿವೆ.













