ಮನೆ ರಾಜ್ಯ ಹುಣಸೂರು: ಪೌರಾಯುಕ್ತ ಸುಜಯ್‌ ಕುಮಾರ್ ಅಧಿಕಾರಾವಧಿಯಲ್ಲಿ ಅಕ್ರಮ- ತನಿಖೆಗೆ ಆದೇಶ

ಹುಣಸೂರು: ಪೌರಾಯುಕ್ತ ಸುಜಯ್‌ ಕುಮಾರ್ ಅಧಿಕಾರಾವಧಿಯಲ್ಲಿ ಅಕ್ರಮ- ತನಿಖೆಗೆ ಆದೇಶ

0

ಹುಣಸೂರು: ನಗರಸಭೆಯಲ್ಲಿ ಹಿಂದಿನ ಪೌರಾಯುಕ್ತರ ಅವಧಿಯಲ್ಲಿ ನಡೆದಿರುವ ಅಕ್ರಮಗಳ ದೂರಿನ ಹಿನ್ನೆಲೆ ಡಿ.4ರ ಸೋಮವಾರ ಸಂಜೆ ಅಧಿಕಾರಿಗಳ ತಂಡ ನಗರಸಭಾ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, ಹಲವಾರು ಕಡತಗಳನ್ನು ವಶಪಡಿಸಿಕೊಂಡಿದ್ದಾರೆ.

ಹಿಂದಿನ ಪೌರಾಯುಕ್ತ ಸುಜಯ್‌ ಕುಮಾರ್ ಅಧಿಕಾರಾವಧಿಯಲ್ಲಿ ಅಕ್ರಮ ಖಾತೆಗಳನ್ನು ಮಾಡಿದ್ದಾರೆ. ನಿಯಮ ಬಾಹಿರವಾಗಿ ಸರಕಾರಿ ಭೂಮಿಯನ್ನು ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ನಮೂನೆ-3 ದಾಖಲಾತಿಗಳನ್ನು ಅಕ್ರಮವಾಗಿ ನೀಡಿ ಸರಕಾರಕ್ಕೆ ಲಕ್ಷಾಂತರ ರೂ. ಆರ್ಥಿಕ ನಷ್ಟ ಉಂಟು ಮಾಡಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಸಂಜೆ 5 ಗಂಟೆ ವೇಳೆಯಲ್ಲಿ ಕಚೇರಿ ಕೆಲಸ ಮುಗಿಸಿ ಸಿಬ್ಬಂದಿಗಳು ಮನೆ ಕಡೆಗೆ ಹೊರಡಲು ಸಿದ್ದತೆ ನಡೆಸುತ್ತಿದ್ದ ವೇಳೆ ಉಪ ವಿಭಾಗಾಧಿಕಾರಿಯ ಸೂಚನೆಯಂತೆ ಗ್ರೇಡ್-2 ತಹಶೀಲ್ದಾರ್ ಯಧುಗಿರೀಶ್ ನೇತೃತ್ವದ ತಂಡ ರಾತ್ರಿವರೆಗೂ ಕಡತಗಳನ್ನು ಪರಿಶೀಲಿಸಿ ಕಂದಾಯಾಧಿಕಾರಿಗಳಿಂದ ಮಾಹಿತಿ ಪಡೆದು ವಶಪಡಿಸಿಕೊಂಡರು. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ತಮಗೆ ಹಿಂದಿನ ಪೌರಾಯುಕ್ತರಾಗಿದ್ದ ಸುಜಯ್‌ ಕುಮಾರ್ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮ ನಡೆಸಿದ್ದಾರೆಂಬ ದೂರಿನ ಹಿನ್ನೆಲೆ ನಮ್ಮ ಕಚೇರಿ ಅಧಿಕಾರಿಗಳನ್ನು ನಗರಸಭೆಗೆ ಕಳುಹಿಸಿ ಕಡತಗಳನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಸೂಚಿಸಿರುವುದಾಗಿ ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ತಿಳಿಸಿದರು.