ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬೆಡ್ಶೀಟ್ಗಾಗಿ ಕೋರ್ಟ್ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಚಳಿ ತಡೆಯೋಕೆ ಆಗದೇ ನಿದ್ದೆ ಬರ್ತಿಲ್ಲ. ಬೆಡ್ಶೀಟ್ ಕೊಡಿಸುವಂತೆ ಜಡ್ಜ್ ಮುಂದೆ ನಟ ಮನವಿ ಮಾಡಿಕೊಂಡಿದ್ದಾರೆ.
ಟ್ರಯಲ್ ಆರಂಭ ಸಂಬಂಧ ಇಂದು ಪರಪ್ಪನ ಅಗ್ರಹಾರ ಜೈಲಿಂದ ಕೋರ್ಟ್ಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರ ಗೌಡ ಮತ್ತು ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಒಂದು ಮನವಿ ಇದೆ ಎಂದ ಆರೋಪಿ ನಾಗರಾಜ್, ಬೆಡ್ಶೀಟ್ ಕೊಡಿಸುವಂತೆ ಮನವಿ ಮಾಡಿದರು. ‘ಸ್ವಾಮಿ ಬೆಡ್ಶೀಡ್ ಕೊಡಿಸಿ, ಇವರು ಕೊಡ್ತಿಲ್ಲ. ಮನೆಯಿಂದ ತಂದು ಕೊಟ್ರೆ ಅದನ್ನೂ ಕೊಡೋದಕ್ಕೆ ಬಿಡ್ತಿಲ್ಲ’ ಅಂತಾ ಅಳಲನ್ನು ತೋಡಿಕೊಂಡರು.
ಈ ವೇಳೆ ಮುಂದೆ ಬಂದ ದರ್ಶನ ಮೈಕ್ ಹಿಡಿದು, ಸ್ವಾಮಿ ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಎಲ್ಲರ ಸಮಸ್ಯೆಯಾಗಿದೆ. ತುಂಬಾನೆ ಚಳಿ ಇದೆ ಸರ್. ಚಳಿಗೆ ರಾತ್ರಿ ಎಲ್ಲಾ ನಿದ್ದೆ ಬರ್ತಿಲ್ಲ. ನಿದ್ದೆ ಇಲ್ಲದೆ ರಾತ್ರಿಯೆಲ್ಲಾ ಎದ್ದು ಕೂರ್ತಿದ್ದೀವಿ. ಮೂಲೆಯಲ್ಲಿ ಕುಳಿತು ಕಾಲ ದೂಡ್ತಿದ್ದೀವಿ. ಎಲ್ಲರಿಗೂ ಪ್ರಾಬ್ಲಂ ಆಗಿದೆ ಸರ್. ಸಿಕ್ಕಪಟ್ಟೆ ಚಳಿ ಇದೆ, ಬೆಡ್ಶೀಟ್ ಕೊಡಿಸಿ ಎಂದು ಕೇಳಿದರು.
ಆರೋಪಿ ನಾಗರಾಜ್ ವಿಚಾರ ಪ್ರಸ್ತಾಪ ಮಾಡಿದಾಗಲೇ ಗರಂ ಆದ ಜಡ್ಜ್, ಜೈಲಾಧಿಕಾರಿ ಶಂಕರ್ಗೆ ಚಳಿ ಬಿಡಿಸಿದರು. ಚಳಿಗಾಲ ಹೆಚ್ಚಾಗಿದೆ, ನೀವು ಬೆಡ್ಶೀಟ್ ಕೊಡೋದಕ್ಕೆ ಏನು ಸಮಸ್ಯೆ? ಅವರು ಹೇಗೆ ಮಲ್ಕೊಬೇಕು? ಇದನ್ನೆಲ್ಲಾ ನಾವೇ ಹೇಳಬೇಕಾ ಅಂತಾ ಗರಂ ಆದರು. ದರ್ಶನ್ ಮನವಿ ಬಳಿಕ ಜೈಲರ್ಗೆ ಆದೇಶ ಮಾಡಿದ ನ್ಯಾಯಾಧೀಶರು ಕಾನೂನಿನಲ್ಲಿ ಅವಕಾಶ ಇರೋದನ್ನು ಕೊಡಿ. ಹೊರಗೆ ಚಳಿ ಜಾಸ್ತಿಯಿದೆ ಗೊತ್ತಾಗಲ್ವ ಅಂತಾ ಜಾಡಿಸಿದರು.
ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಪವಿತ್ರ ಗೌಡ ಸೇರಿದಂತೆ 6 ಆರೋಪಿಗಳು ಜೈಲಿನಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾದರೆ, ಉಳಿದ ಆರೋಪಿಗಳು ಖುದ್ದು ಹಾಜರಿದ್ದರು. ಸಿಆರ್ಪಿಸಿ 292 ಅಡಿ ಸಾಕ್ಷಿಗಳ ವಿಚಾರಣೆ ಸಂಬಂಧ ಪ್ರಾಸಿಕ್ಯೂಷನ್ ಸಲ್ಲಿಸಿರುವ ಅರ್ಜಿಗೆ ಪವಿತ್ರ ಗೌಡ ಪರ ವಕೀಲರು ಆಕ್ಷೇಪ ಎತ್ತಿದರು. ಈ ಸಂದರ್ಭದಲ್ಲಿ ಈ ಅರ್ಜಿ ಸಲ್ಲಿಸೋದಕ್ಕೆ ಬರೋದಿಲ್ಲ ಅಂತಾ ವಾದಿಸಿದರು. ಡಿ.3 ಕ್ಕೆ ಮುಂದಿನ ವಿಚಾರಣೆ ಮುಂದೂಡಿಕೆಯಾಗಿದೆ.















