ಮನೆ ರಾಜ್ಯ ಮೋದಿ ಕಾರಣದಿಂದಲೇ ನನಗೆ ಪದ್ಮಭೂಷಣ ಪುರಸ್ಕಾರ ದೊರೆತಿದೆ: ಡಾ.ಎಸ್.ಎಲ್.ಭೈರಪ್ಪ

ಮೋದಿ ಕಾರಣದಿಂದಲೇ ನನಗೆ ಪದ್ಮಭೂಷಣ ಪುರಸ್ಕಾರ ದೊರೆತಿದೆ: ಡಾ.ಎಸ್.ಎಲ್.ಭೈರಪ್ಪ

0

ಮೈಸೂರು(Mysuru: ಪದ್ಮಭೂಷಣ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಕ್ಕೆ ಮೋದಿ ನೇತೃತ್ವದ ಸರ್ಕಾರಕ್ಕೆ ಕೃತಜ್ಞತೆ ಹೇಳುತ್ತೇನೆ. ಮೋದಿ ಕಾರಣದಿಂದಲೇ ನನಗೆ ಇದು ದೊರೆತಿದೆ. ಇಲ್ಲದಿದ್ದರೆ ಬರುತ್ತಿರಲಿಲ್ಲ ಎಂದು ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ಹೇಳಿದರು.

ಪದ್ಮಭೂಷಣ ಪುರಸ್ಕಾರ ದೊರೆತಿದ್ದಕ್ಕೆ, ಇಲ್ಲಿನ ಕುವೆಂಪುನಗರದ ತಮ್ಮ ನಿವಾಸದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಪ್ರಶಸ್ತಿ ಕೊಟ್ಟರೆಂಬ ಕಾರಣಕ್ಕೆ ಅವರ ಸರ್ಕಾರವನ್ನು ಹೊಗಳುವುದಿಲ್ಲ. ನಾನು ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ರಾಜಕೀಯದ ಬಗ್ಗೆ ಓದಿಕೊಂಡಿದ್ದೇನೆ. ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ. ಹೀಗಾಗಿ, ಬಹಳ ಸಂತಸವಾಗುತ್ತದೆ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ ಎಂದರು.

2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಹೆಚ್ಚೆಚ್ಚು ಬಹುಮತದಿಂದ ಗೆಲ್ಲಬೇಕು. ನಂತರ ನಿವೃತ್ತಿಗೊಳ್ಳಬೇಕು. ಅಲ್ಲಿಯವರೆಗೆ, ಅವರಂತೆಯೇ ಇರುವವರನ್ನು ತಯಾರು ಮಾಡಬೇಕು ಎಂದು ಹೇಳಿದರು.

ಈಗ ದೇಶ ಬಹಳ ಪ್ರಗತಿ ಸಾಧಿಸಿದೆ. ಅಂತೆಯೇ ಸವಾಲುಗಳೂ ಇವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ವಿರೋಧ ಪಕ್ಷದಲ್ಲಿರುವವರು ಜವಾಬ್ದಾರಿ ಏನೆಂದು ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ ಎಂದು ವಿಷಾದಿಸಿದರು.

ಬೈಗುಳ ಬಿಟ್ಟು ಅಧ್ಯಯನ ಮಾಡಿ, ಅಂಕಿ–ಅಂಶಗಳನ್ನು ಇಟ್ಟುಕೊಂಡು ಸರ್ಕಾರವು ಯಾವ್ಯಾವುದನ್ನು ಮಾಡಿಲ್ಲ ಎಂದು ತಿಳಿಸಬೇಕು. ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ ಎಂದರು.

ಪದ್ಮಭೂಷಣ ‍ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಕ್ಷಾಂತರ ಮಂದಿ ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಖುಷಿ ಕೊಡುತ್ತದೆ. ನನಗೀಗ 92 ವರ್ಷ ವಯಸ್ಸು. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ಮುಂದೆಯೂ ನನ್ನ ಪುಸ್ತಕಗಳು ಪ್ರಸ್ತುತವಾಗಿರುತ್ತವೆಯೇ? ಹಾಗಾದಾಗ ಅದೇ ನಿಜವಾದ ಪ್ರಶಸ್ತಿ ಎಂದು ಹೇಳಿದರು.

ಕುಮಾರವ್ಯಾಸ ಐದು ನೂರು ವರ್ಷ ಹಿಂದಿನವನು. ಈಗಲೂ ಆತನನ್ನು ಓದುತ್ತಾರೆ. ಆ ಬರವಣಿಗೆಯಲ್ಲಿ ಅಂತಹ ಶಕ್ತಿ ಇದೆ. ನನ್ನ ಬರವಣಗೆಯಲ್ಲೂ ಆಂತಹ ಶಕ್ತಿ ಇದೆಯೇ ಎನ್ನುವುದನ್ನು ಆಲೋಚಿಸಬೇಕು. ನಾನು ಈವರೆಗೂ ಆಲೋಚಿಸುತ್ತಿರುವುದು ಇದನ್ನೇ ಎಂದರು.

ಭೈರ‍ಪ್ಪ ಅವರನ್ನು ಜಿಲ್ಲಾಡಳಿತದ ಪರವಾಗಿ ಅಭಿನಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಮಾತನಾಡಿ, ಕೇಂದ್ರ ಸರ್ಕಾರವು ಪದ್ಮ ಶ್ರೇಣಿಯ ಪುರಸ್ಕಾರಕ್ಕೆ ಅತ್ಯುತ್ತಮರನ್ನು ಆಯ್ಕೆ ಮಾಡಿದೆ. ಇದರಿಂದ ಇಡೀ ರಾಜ್ಯದ ಜನರಿಗೆ ಖುಷಿಯಾಗಿದೆ ಎಂದು ಹೇಳಿದರು.

ಹಿಂದಿನ ಲೇಖನ74ನೇ ಗಣರಾಜ್ಯೋತ್ಸವ ಪರೇಡ್’ನಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧಚಿತ್ರ
ಮುಂದಿನ ಲೇಖನನಾವು ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ: ಸಿದ್ದರಾಮಯ್ಯ